ಮಹಾರಾಷ್ಟ್ರ : ಉತ್ಖನನದ ವೇಳೆ ‘ಶೇಷಶಾಯಿ ವಿಷ್ಣು’ ವಿಗ್ರಹವೊಂದು ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಿಂಧಖೇಡ್ ರಾಜಾ ಪಟ್ಟಣದಲ್ಲಿ
ಪತ್ತೆಯಾಗಿದೆ.
ಲಖುಜಿ ಜಾಧವರಾವ್ ಮಹಾರಾಜ್ ಅವರ ಛತ್ರಿ ಅಂದರೆ ಸಭಾಮಂಟಪವನ್ನು ಪತ್ತೆ ಮಾಡಲು ಉತ್ಖನನ ಮಾಡುವ ವೇಳೆ ಈ ವಿಗ್ರಹ ಪತ್ತೆಯಾಗಿದೆ.
ಪರಿಶೀಲನೆ ನಡೆಸುವಾಗ ಮೊದಲಿಗೆ ಲಕ್ಷ್ಮಿ ದೇವಿಯ ವಿಗ್ರಹ ಪತ್ತೆಯಾಗಿದೆ ನಂತರ ಶೇಷಶಾಯಿ ವಿಷ್ಣುವಿನ ಬೃಹತ್ ವಿಗ್ರಹ ಪತ್ತೆಯಾಗಿದೆ ಎಂದು ನಾಗ್ಪುರದ ಪುರಾತತ್ವಶಾಸ್ತ್ರಜ್ಞ ಅರುಣ್ ಮಲಿಕ್ ತಿಳಿಸಿದ್ದಾರೆ.
ಈ ವಿಗ್ರಹ 1.70 ಮೀಟರ್ ಉದ್ದ ಮತ್ತು 1 ಮೀಟರ್ ಎತ್ತರವಿದ್ದು, ತಳಹದಿಯ ಅಗಲವು 30 ಸೆಂಟಿಮೀಟರ್ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
‘ಈ ಶಿಲ್ಪವು ಕ್ಲೋರೈಟ್ ಶಿಸ್ಟ್ ಶಿಲೆಯಿಂದ ತಯಾರು ಮಾಡಲಾಗಿದ್ದು, ಈ ಪ್ರಕಾರದ ಶಿಲ್ಪಗಳನ್ನು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಹೊಯ್ಸಳು ತಯಾರಿಸುತ್ತಿದ್ದರು. ಹೀಗಾಗಿ ಇದು ಹೊಯ್ಸಳರ ಕಾಲದ್ದೇ ಇರಬೇಕು ಎಂದು ಅಂದಾಜಿಸಲಾಗಿದೆ
ಈ ವಿಗ್ರಹದಲ್ಲಿ ವಿಷ್ಣು, ಶೇಷನಾಗನ ಮೇಲೆ ಮಲಗಿರುವ ಮುದ್ರೆಯಲ್ಲಿದ್ದು, ಲಕ್ಷ್ಮಿಯು ಕುಳಿತು ವಿಷ್ಣುವಿನ ಪಾದಗಳನ್ನು ಒತ್ತುತ್ತಿರುವ ದೃಶ್ಯವಿದೆ. ವಿಗ್ರಹದ ಸುತ್ತಲೂ ವಿಷ್ಣು ದಶಾವತಾರ, ಸಮುದ್ರಮಂಥನವನ್ನು ಚಿತ್ರಿಸಲಾಗಿದೆ. ಸಮುದ್ರಮಂಥನದ ಅಶ್ವ, ಐರಾವತ ಮುಂತಾದವುಗಳೂ ವಿಗ್ರಹದ ಮೇಲೆ ಕಾಣಸಿಗುತ್ತವೆ’ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ