ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟನೆಯನ್ನು ಸಂತೋಷದಿಂದ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು. ಫಿಲ್ಮ್ ಚೇಂಬರ್ ನ ನೂತನ ಕಟ್ಟಡವನ್ನು ಉದ್ಘಾಟಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಕನ್ನಡದಲ್ಲಿ ಓಟಿಟಿ ವೇದಿಕೆ ತರಲು ಸಂಬಂಧಪಟ್ಟವರೊಡನೆ ಚರ್ಚಿಸುವುದಾಗಿ ಹೇಳಿದರು.
ನಿನ್ನೆ ದೆಹಲಿಯಲ್ಲಿ ಪ್ರಧಾನ ಮಂತ್ರಿಗಳು ರಾತ್ರಿ 8 ಗಂಟೆಗೆ ಅಪಾಯಿಂಟ್ಮೆಂಟ್ ನೀಡಿದ್ದರು. ಆದರೂ ಕನ್ನಡ ಚಿತ್ರರಂಗದ ಮೇಲೆ ನನಗೆ ಅಪಾರ ಗೌರವವಿದೆ. ಮಿಸ್ ಮಾಡದೇ ಬರಬೇಕು ಅಂತ ಬಂದಿದ್ದೀನಿ ಎಂದರು.
ಕನ್ನಡ ಚಲನಚಿತ್ರಗಳ ಬೆಳವಣಿಗೆಗೆ ನಮ್ಮ ಸಹಾಯ ಇದ್ದೇ ಇರುತ್ತದೆ. ಡಾ. ರಾಜ್ಕುಮಾರ್ ಅವರ ಕನಸಾಗಿದ್ದ ಫಿಲ್ಮ್ ಸಿಟಿ ನಿರ್ಮಾಣಕ್ಕೂ ಸಹಾಯ ಮಾಡಲಾಗುತ್ತದೆ. ಮೈಸೂರಿನಲ್ಲಿ ಈ ಬಗ್ಗೆ ಸ್ಥಳ ಹುಡುಕಾಟ ನಡೆದಿದೆ. ಇದನ್ನು ಖಾಸಗಿ ಅವರ ಜೊತೆ ಸೇರಿ ಪಿಪಿಪಿ ಮಾದರಿಯಲ್ಲಿ ಮಾಡುತ್ತೇವೆ. ಫಿಲ್ಮ್ ಸಿಟಿ ಮಾಡೇ ಮಾಡುತ್ತೇವೆ ಎಂದರು.
ಸರ್ಕಾರದಿಂದ ಓಟಿಟಿ ರಚನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಒಟ್ಟಿನಲ್ಲಿ ಕನ್ನಡ ಭಾಷೆ, ಕನ್ನಡ ಸಿನಿಮಾ ನಿರ್ಮಾಣಕ್ಕೆ ಸಹಾಯ ಮಾಡಲಾಗುವುದು. ಕನ್ನಡ ಚಿತ್ರರಂಗದ ಬೆಳವಣಿಗೆಗೆ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನಮ್ಮಿಂದ ಇರುತ್ತೆ. ಚಿತ್ರಮಂದಿರಗಳು, ಸಬ್ಸಿಡಿ ಬಗ್ಗೆ ಗಮನ ಹರಿಸ್ತೀನಿ. ಆರ್ಥಿಕ ನೆರವು ನೀಡ್ತೀವಿ ಎಂದರು.