ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ (Telangana Election) ಜಯಭೇರಿ ಬಾರಿಸಿದ ರೇವಂತ್ ರೆಡ್ಡಿ (Revant Reddy) ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ತೆಲಂಗಾಣ ರಚನೆಯಾದ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದಿದ್ದು, ಎಲ್ ಬಿ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ರೇಮಂತ್ ರೆಡ್ಡಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರ ಜೊತೆ 12 ಜನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ (Tamilisai Soundararajan) ಪ್ರಮಾಣವಚನ ಬೋಧಿಸಿದರು.
#WATCH | Congress leader Revanth Reddy takes oath as the Chief Minister of Telangana at Hyderabad's LB stadium; Governor Tamilisai Soundararajan administers him the oath of office. pic.twitter.com/TBtZRE0YQD
— ANI (@ANI) December 7, 2023
ಸಿಎಂ ಅಭ್ಯರ್ಥಿ ಆಯ್ಕೆ ಜವಾಬ್ದಾರಿಯನ್ನು ಹೈಕಮಾಂಡ್ ಗೆ ವಹಿಸಲಾಗಿತ್ತು. ಮಾತುಕತೆಯ ಬಳಿಕ ಪಿಸಿಸಿ ಅಧ್ಯಕ್ಷರಾಗಿರುವ ರೇವಂತ್ ರೆಡ್ಡಿ ಅವರ ಹೆಸರನ್ನೇ ಎಲ್ಲರೂ ಅಖೈರುಗೊಳಿಸಿದ್ದರು. ಡಿಸೆಂಬರ್ 9ರಂದು ಸೋನಿಯಾ ಗಾಂಧಿ (Sonia Gandhi) ಅವರ ಜನ್ಮದಿನ ಹಾಗೂ ತೆಲಂಗಾಣ ರಾಜ್ಯವಾಗಿ ಘೋಷಣೆ ಮಾಡಿದ ದಿನದಂದೇ ಕಾಂಗ್ರೆಸ್ ಸರ್ಕಾರ ರಚನೆಗೆ ಪ್ಲಾನ್ ಮಾಡಲಾಗಿತ್ತು. ಇದನ್ನು ರೇವಂತ್ ರೆಡ್ಡಿ ಚುನಾವಣಾ ಪ್ರಚಾರದ ವೇಳೆ ಹಲವು ಬಾರಿ ಹೇಳಿದ್ದರು. ಆದರೆ, ಕಾರಣಾಂತರಗಳಿಂದ ಎರಡು ದಿನಗಳ ಮೊದಲೇ ನಡೆಸಲಾಗಿದೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕಾ ವಾದ್ರಾ (Priyanka Gandhi), ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೇರಿದಂತೆ ಪ್ರಮುಖ ನಾಯಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.