ರಾಜಸ್ಥಾನ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಪಡೆದಿದ್ದು, ಈಗ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬ ಚರ್ಚೆಗಳು ಶುರುವಾಗಿವೆ. ಸಿಎಂ ರೇಸ್ ನಲ್ಲಿರುವ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.
ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ತಿಜಾರಾ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ ಮಹಂತ್ ಬಾಲಕ್ ನಾಥ್, ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಸಿಪಿ ಜೋಶಿ ಮತ್ತು ಕೇಂದ್ರ ಸಚಿವ ಗಜೇಂದ್ರ ಶೇಖಾವತ್ ಅವರು ಮುಖ್ಯಮಂತ್ರಿ ಗಾದಿಯ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅದರಲ್ಲೂ ಮಹಂತ್ ಬಾಲಕ್ ನಾಥ್ ಅವರು ಹೆಸರು ಮುಂಚೂಣಿಯಲ್ಲಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತೆ, ಬಾಲಕನಾಥ್ ಕೂಡ ನಾಥ ಸಮುದಾಯದಿಂದ ಬಂದವರು. ಅವರು ಅಲ್ವಾರ್ನಲ್ಲಿ ಅಪಾರ ಬೆಂಬಲ ಮತ್ತು ಅನುಯಾಯಿಗಳನ್ನು ಹೊಂದಿದ್ದಾರೆ. ಅವರು ತಮ್ಮ 6 ನೇ ವಯಸ್ಸಿನಲ್ಲಿ ಸನ್ಯಾಸವನ್ನು ತೆಗೆದುಕೊಂಡರು. ಬಾಬಾ ಬಾಲಕ್ ನಾಥ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರೀತಿಯಲ್ಲೇ ಸಂಸತ್ ಸದಸ್ಯರಾಗಿದ್ದವರು. ರಾಜಸ್ಥಾನದ ಅಲ್ವಾರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಬಾಬಾ, ರಾಜಸ್ಥಾನದ ಯೋಗಿ ಎಂದೇ ಜನಪ್ರಿಯ. ಇದೀಗ ವಿಧಾನಸಭಾ ಚುನಾವಣೆಯಲ್ಲೂ ಬಾಬಾ ಗೆಲುವು ಸಾಧಿಸಿದ್ದು, ಸಿಎಂ ಆಗಬಹುದೇ ಎಂಬ ನಿರೀಕ್ಷೆ ಗರಿಗೆದರಿದೆ.
ಜೈಪುರ ರಾಜಮನೆತನದ ರಾಜಕುಮಾರಿಯಾದ ದಿಯಾ ಕುಮಾರಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವಿದ್ಯಾಧರ್ ನಗರ ಕ್ಷೇತ್ರದಿಂದ 71,368 ಮತಗಳಿಂದ ಗೆದ್ದಿದ್ದಾರೆ. ಈ ಮೊದಲು ಅವರು ಬಿಜೆಪಿ ಸಂಸದರಾಗಿದ್ದರು. ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಯಶಸ್ಸು ಕಂಡಿದೆ. ಈ ಬಳಿಕ ‘ರಾಜಕುಮಾರಿ’ ದಿಯಾ ಕುಮಾರಿ ರಾಜ್ಯದ ಸಿಎಂ ಆಗಲಿದ್ದಾರೆ ಎಂಬ ಮಾತು ಸಾಕಷ್ಟು ಕೇಳಿ ಬರುತ್ತಿದೆ.