ಬೆಂಗಳೂರು: ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ನಾಳೆ ನಡೆಯಲಿದ್ದು, ನಿನ್ನೆ ಸಂಜೆಯೇ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಸ್ಥಾನಗಳಲ್ಲಿ 1717 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ನಾಳೆ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೂ ಮತದಾನ ನಡೆಯಲಿದೆ.
ಆಂಧ್ರ ಪ್ರದೇಶ,(25) & ತೆಲಂಗಾಣ(17)ದ ಎಲ್ಲ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶ (13), ಮಹಾರಾಷ್ಟ್ರ (11), ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ (ತಲಾ 8), ಬಿಹಾರ (5), ಒಡಿಶಾ ಮತ್ತು ಜಾರ್ಖಂಡ್ (ತಲಾ 4) ಮತ್ತು ಜಮ್ಮು ಮತ್ತು ಕಾಶ್ಮೀರ (1) ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆಯಲಿದೆ. 4ನೇ ಹಂತದ ಮತದಾನ ಅಂತ್ಯದೊಂದಿಗೆ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ಪೂರ್ಣಗೊಳ್ಳಲಿದೆ.
4ನೇ ಹಂತದಲ್ಲಿ ಅಖಿಲೇಶ್ ಯಾದವ್ (ಕನೌಜ್), ಒಮರ್ ಅಬ್ದುಲ್ಲಾ (ಶ್ರೀನಗರ), ಗಿರಿರಾಜ್ ಸಿಂಗ್ (ಬೆಗುಸರೈ), ಅಧೀರ್ ರಂಜನ್ ಚೌಧರಿ (ಬಹರಂಪುರ), ಮಹುವಾ ಮೊಯಿತ್ರಾ (ಕೃಷ್ಣನಗರ), ಶತ್ರುಘ್ನನ್ ಸಿನ್ಹಾ (ಅಸನ್ಸೋಲ್), ಅಸಾದುದ್ದೀನ್ ಓವೈಸಿ (ಹೈದರಾಬಾದ್) ಮತ್ತು ವೈ.ಎಸ್. ಶರ್ಮಿಳಾ (ಕಡಪಾ) ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ. ಜೂನ್ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.