ಹಾಥರಸ್: ಇಲ್ಲಿ ಮಂಗಳವಾರ ನಡೆದ ಸತ್ಸಂಗದ ನಂತರ ಉಂಟಾದ ಕಾಲ್ತುಳಿತಕ್ಕೆ ಬಲಿಯಾದವರ ಸಂಖ್ಯೆ 121 ಕ್ಕೇರಿದೆ. ತೀವ್ರವಾಗಿ ಗಾಯಗೊಂಡವರ ಸಂಖ್ಯೆ 28 ದಾಟಿದ್ದು 6 ಮಂದಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವಿನ ಸಂಖೆಯ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ.
ಸತ್ಸಂಗ ಆಯೋಜಿಸಿದ್ದ ನಾರಾಯಣ ಸಾಕರ್ ಅಲಿಯಾಸ್ ಭೋಲೆ ಬಾಬಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಈ ಬಾಬಾ ನಮ್ಮ ಕೈಗೆ ಸಿಕ್ಕಿಲ್ಲ. ಸತ್ಸಂಗ ನಡೆದ ಜಾಗದಲ್ಲಿ ಅವರು ಇರಲಿಲ್ಲ. ಅವನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಡಿಎಸ್ ಪಿ ಸುನಿಲ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಪೊಲೀಸರು ಆಯೋಜಕರ ವಿರುದ್ಧವೂ ದೂರು ದಾಖಲಿಸಿದ್ದಾರೆ. ಎಫ್ಐಆರ್ ನಲ್ಲಿ ಮುಖ್ಯ ಸೇವಾದಾರ ದೇವಪ್ರಕಾಶ್ ಮಧುಕರ್ ಮತ್ತು ಸಂಘಟಕರು ಪ್ರಮುಖ ಆರೋಪಿಗಳು ಎಂದು ಉಲ್ಲೇಖಿಸಲಾಗಿದೆ.
ಈ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಅವಘಡದ ಹಿಂದೆ ಇರುವ ಯಾರನ್ನು ಬಿಡುವ ಮಾತಿಲ್ಲ. ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.