ಉತ್ತರ ಕನ್ನಡ : ಜೂನ್ 4ರ ನಂತರ ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾಗುತ್ತದೆ. ನನಗೆ ಹೈಕಮಾಂಡ್ ಭರವಸೆ ನೀಡಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ.
ಜಿಲ್ಲೆಯ ಕುಮಟಾದಲ್ಲಿ ಮಾತನಾಡಿದ ಅವರು, ನನಗೆ ವಿಪಕ್ಷ ನಾಯಕನಾಗುವ ಅರ್ಹತೆ ಇದ್ದರೂ ಸಹ ಮಾಡಲಿಲ್ಲ. ಯಾರ್ಯಾರು ಅಸಮಾಧಾನಿತರು ಇದ್ದಾರೋ ಅವರಿಗೆ ವಿನಂತಿ ಮಾಡುವೆ. ವೈಯಕ್ತಿಕ ವಿಚಾರ ಬಿಟ್ಟು, ನರೇಂದ್ರ ಮೋದಿಗಾಗಿ ನಾವೆಲ್ಲರೂ ಕೂಡಿ ಕೆಲಸ ಮಾಡೋಣ. ಹಿಂದುತ್ವದ ರಾಜಕಾರಣಿಗಳನ್ನು ಯಾವತ್ತೂ ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಚುನಾವಣೆ ಅಪ್ಪ, ಮಕ್ಕಳು, ಅಳಿಯ, ಮಗಳು ಅಂತಲೇ ಆಗಿದೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಚಿವರು ಒಬ್ಬರೂ ನಿಲ್ಲಲಿಲ್ಲ. ಸೋತರೆ ಮಂತ್ರಿ ಸ್ಥಾನ ಹೋಗುತ್ತೆ ಅಂತಾ ಯಾರೂ ಸ್ಪರ್ಧಿಸಿಲ್ಲ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬದಲು ನನ್ನ ಸಿಎಂ ಮಾಡಿದ್ದರೆ 103 ಸ್ಥಾನ ಗೆಲ್ಲಿಸುತ್ತಿದ್ದೆ. ಹಿಂದೂ ಕಾರ್ಯಕರ್ತರು ನಿರಾಸಕ್ತಿ ತೋರಿಸಿದ್ದಕ್ಕೆ ಸೋತಿದ್ದೇವೆ ಎಂದು ಕಿಡಿಕಾರಿದರು.
ಡಾ.ಕೆ.ಸುಧಾಕರ್ ಸಚಿವರಾಗಿದ್ದಾಗ ಶಾಸಕರಿಗೆ ಸ್ಪಂದಿಸುತ್ತಿರಲಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ಕೆ.ಸುಧಾಕರ್ ನಡೆಯಿಂದ ಹಲವು ಶಾಸಕರು ಕಣ್ಣೀರು ಹಾಕಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕಿತ್ತು. ಡಾ. ಸುಧಾಕರ್ ತಪ್ಪಿನಿಂದ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಲಿಲ್ಲ. ಕಾಂಗ್ರೆಸ್ನಲ್ಲಿ ಅಪ್ಪ, ಮಕ್ಕಳು, ಮಾವ, ಅಳಿಯ ಇವರೇ ಅಭ್ಯರ್ಥಿ. ನಮ್ಮ ಪಕ್ಷದಲ್ಲೂ ಅದೇ ರೀತಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಹೈಕಮಾಂಡ್ K.S.ಈಶ್ವರಪ್ಪ ಹೇಳುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಪಕ್ಷಕ್ಕೆ ಮುಜುಗರ ಆಗದ ರೀತಿಯಲ್ಲಿ ಎಲ್ಲಾ ಸಮಸ್ಯೆ ಬಗೆಹರಿಸಬೇಕು. ನಾನು ಹೈಕಮಾಂಡ್ಗೆ ವಿನಂತಿ ಮಾಡಿಕೊಳ್ಳುತ್ತೇನೆ. ಲೋಕಸಭೆಲ್ಲಿ 28 ಕ್ಷೇತ್ರದಲ್ಲಿ ಗೆಲ್ಲುವುದು ನಮ್ಮೆಲ್ಲರ ಗುರಿ ಎಂದರು.