ಗುಜರಾತ್: ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಿರುವ ಎಎಪಿಗೆ ಭಾರೀ ಆಘಾತ ಆಗಿದೆ. ಗುಜರಾತ್ನ ವಿಸಾವದರ್ನ ಕ್ಷೇತ್ರದ ಎಎಪಿ ಶಾಸಕ ಭೂಪತ್ ಭಯಾನಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಪಕ್ಷದೊಳಗಿನ ಎಲ್ಲಾ ಹುದ್ದೆಗಳಿಗೆ ಬುಧವಾರ ಅವರು ರಾಜೀನಾಮೆ ನೀಡಿದ್ದು, ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ.
ರಾಜೀನಾಮೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೆಲಸದ ಮೂಲಕ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಅವರ ಕೆಲಸದಿಂದ ನಾನು ಪ್ರಭಾವಿತನಾಗಿದ್ದೇನೆ. ಮೋದಿ ನಾಯಕತ್ವದಲ್ಲಿ ಭಾರತದ ಘನತೆ ಪ್ರಪಂಚದಾದ್ಯಂತ ಬೆಳೆದಿದೆ.
ಮೋದಿಯಂತೆ ನಾನು ದೇಶ ಸೇವೆ ಮಾಡಬೇಕು. ನಾನು ರಾಷ್ಟ್ರೀಯವಾದಿಯಾಗಿರುವುದರಿಂದ ಆಮ್ ಆದ್ಮಿ ಪಕ್ಷದಲ್ಲಿದ್ದುಕೊಂಡು ದೇಶ ಸೇವೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಆಮ್ ಆದ್ಮಿ ಪಕ್ಷ ಹಾಗೂ ಗುಜರಾತ್ ವಿಧಾನಸಭೆಯ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರಾಷ್ಟ್ರೀಯವಾದಿಯಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಭಯಾನಿ,ಎಲ್ಲರೂ ರಾಷ್ಟ್ರೀಯವಾದಿಗಳು. ಆದರೆ, ಆಮ್ ಆದ್ಮಿ ಪಕ್ಷದಲ್ಲಿ ನಾನು ಬಯಸಿದ ರೀತಿಯಲ್ಲಿ ಕೆಲಸ ಮಾಡಲು ನನಗೆ ಸೂಕ್ತ ವೇದಿಕೆ ಸಿಕ್ಕಿಲ್ಲ ಎಂದು ಸ್ಪಷ್ಟ ಪಡಿಸಿದರು.