ಬೆಂಗಳೂರು: ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗ್ರವಾಲ್ ಅವರು ಸ್ವಾಮಿ ವಿವೇಕಾನಂದರ ಫೋಟೊ ಯಾಕೆ ಇಟ್ಟಿದ್ದೀರಿ? ಎಂದು ಪ್ರಶ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ
ಸಿಎಂ ಸಿದ್ದರಾಮಯ್ಯ ಘಟನೆ ಬಗ್ಗೆ ಎಕ್ಸ್ನಲ್ಲಿ ವಾಗ್ದಾಳಿ ನಡೆಸಿದ್ದು, ಬಿಜೆಪಿ ಮತ್ತು ಸಂಘ ಪರಿವಾರದವರು ತೋರುಗಾಣಿಕೆಗಾಗಿ ವಿವೇಕಾನಂದರನ್ನು ಎಷ್ಟೇ ಆರಾಧಿಸಿದರೂ, ಮುದ್ದಾಡಿದರೂ ಅವರ ಆಂತರ್ಯದೊಳಗೆ ವಿವೇಕಾನಂದರ ಬಗ್ಗೆ ಎಷ್ಟು ಅಸಹನೆ ಇದೆ ಎಂಬುದಕ್ಕೆ ಇಂದಿನ ರಾಜ್ಯ ಬಿಜೆಪಿ ಕಾರ್ಯಕಾರಣಿ ವಿಶೇಷ ಸಭೆಯಲ್ಲಿ ನಡೆದಿರುವ ಘಟನೆ ಸಾಕ್ಷಿ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರು ವೇದಿಕೆಯ ಮೇಲೆ ಕಾರ್ಯಕ್ರಮದಲ್ಲಿ ವಿವೇಕಾನಂದರ ಭಾವಚಿತ್ರ ಯಾಕಿದೆ? ಎಂದು ಪ್ರಶ್ನಿಸುವ ಮೂಲಕ ಮೂಲಕ ಬಹಿರಂಗವಾಗಿಯೇ ತಮ್ಮ ಅಸಮಧಾನ ಹೊರಹಾಕಿದ್ದಾರೆ. ವಿವೇಕಾನಂದರ ಪುಣ್ಯಸ್ಮರಣೆಯ ದಿನದಂದೇ ಅವರನ್ನು ಅವಮಾನಿಸುವ ಮೂಲಕ ಬಿಜೆಪಿ ಇಡೀ ಹಿಂದೂ ಸಮಾಜಕ್ಕೆ ಅವಮಾನಗೈದಿದೆ ಎಂದಿದ್ದಾರೆ.
ಬಿಜೆಪಿ ಮತ್ತು ಸಂಘ ಪರಿವಾರದವರು ತೋರುಗಾಣಿಕೆಗಾಗಿ ವಿವೇಕಾನಂದರನ್ನು ಎಷ್ಟೇ ಆರಾಧಿಸಿದರೂ, ಮುದ್ದಾಡಿದರೂ ಅವರ ಆಂತರ್ಯದೊಳಗೆ ವಿವೇಕಾನಂದರ ಬಗ್ಗೆ ಎಷ್ಟು ಅಸಹನೆ ಇದೆ ಎಂಬುದಕ್ಕೆ ಇಂದಿನ @BJP4Karnataka ಕಾರ್ಯಕಾರಣಿ ವಿಶೇಷ ಸಭೆಯಲ್ಲಿ ನಡೆದಿರುವ ಘಟನೆ ಸಾಕ್ಷಿ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗರ್ವಾಲ್… pic.twitter.com/7GYdSGsDPS
— Siddaramaiah (@siddaramaiah) July 4, 2024
ಈ ಕುರಿತು ಆಪ್ ಪಕ್ಷ ಆಕ್ರೋಶ ಹೊರಹಾಕಿದ್ದು,ಬಿಜೆಪಿ ಹಾಗೂ ಸಂಘ ಪರಿವಾರ ಭಾರತದಲ್ಲಿ ಬಲವಾಗಿ ಬೇರೂರಲು ಸ್ವಾಮಿ ವಿವೇಕಾನಂದರನ್ನು ದುರ್ಬಳಕೆ ಮಾಡಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಕಳೆದ 10 ವರ್ಷಗಳಿಂದ ಅಧಿಕಾರ ಸಾಧಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿಗೆ ಸ್ವಾಮಿ ವಿವೇಕಾನಂದರ ಅಗತ್ಯವೂ ಇಲ್ಲ. ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆಯ ಅಂಗವಾಗಿ ಇರಿಸಲಾಗಿದ್ದ ಫೋಟೊವನ್ನು ಯಾಕೆ ಇಟ್ಟಿದ್ದೀರಿ ಎಂದು ಪ್ರಶ್ನಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗ್ರವಾಲ್, ಬಿಜೆಪಿ ಪಾಲಿಗೆ ವಿವೇಕಾನಂದರು ಬಳಸಿ ಬಿಸಾಡಲ್ಪಟ್ಟವರು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಆರೋಪಿಸಿದ್ದಾರೆ.