ರಾಜಸ್ಥಾನ : ಅಮರನಾಥ ಯಾತ್ರೆ ಶನಿವಾರದಿಂದ ಆರಂಭಗೊಂಡಿದ್ದು, ಮೊದಲ ದಿನವೇ 13 ಸಾವಿರ ಮಂದಿ ಯಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದಿದ್ದಾರೆ. ದೇಶ ವಿದೇಶಗಳಿಂದ ಭಕ್ತಾದಿಗಳು ಆಗಮಿಸುತ್ತಿರುವ ಅಮರನಾಥ ಯಾತ್ರೆಯಲ್ಲಿ ವಿಶಿಷ್ಟ ಭಕ್ತನೊಬ್ಬನ ಯಾತ್ರೆ ಎಲ್ಲರ ಗಮನ ಸೆಳೆದಿದೆ.
ಇವರ ಹೆಸರು ಆನಂದ್ ಸಿಂಗ್. ರಾಜಸ್ಥಾನದ ಮೂಲದ ಇವರು 2002 ರಲ್ಲಿ ಅಪಘಾತವೊಂದರಲ್ಲಿ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದರು. ಆದರೆ ಶಿವನ ಭಕ್ತರಾಗಿರುವ ಇವರು ಈ ಬಾರಿ ಹನ್ನೆರಡನೇ ಬಾರಿಗೆ ಅಮರನಾಥ ಯಾತ್ರೆಗೆ ಸಜ್ಜಾಗಿದ್ದಾರೆ.
ಕಳೆದ 15 ವರ್ಷಗಳಲ್ಲಿ ಕೇವಲ ಮೂರು ಬಾರಿ ಇವರು ಅಮರನಾಥ ಯಾತ್ರೆಯಲ್ಲಿ ಪಾಲ್ಗೊಂಡಿಲ್ಲ. ಎರಡೂ ಕಾಲುಗಳು ಇಲ್ಲದಿದ್ರೂ ಸಹ ತಮ್ಮ ಕೈಗಳಿಗೆ ಗವಸು ಧರಿಸಿ ತೆವಳುತ್ತಲೇ ಸಾಗುವ ಇವರ ದೈವ ಭಕ್ತಿ ನೂರಾರು ಜನರ ಕಣ್ಣು ತೇವವಾಗಿಸಿದೆ.
ಮೊದಲ ಮೂರು ನಾಲ್ಕು ವರ್ಷಗಳ ಇಡೀ ಪರ್ವತ ಚಾರಣವನ್ನು ಕೈಗಳಲ್ಲೇ ಮಾಡಿದೆ. ಈಗ ಡೋಲಿಯಲ್ಲಿ ಸಾಗುತ್ತಿದ್ದೇನೆ ಎಂದು ಆನಂದ್ ಸಿಂಗ್ ಹೇಳಿದ್ದಾರೆ.