Sunday, July 7, 2024
Homeಆಧ್ಯಾತ್ಮಬುಧವಾರ ಈ ಕೆಲಸಗಳನ್ನ ಮಾಡಿ, ನಿಮ್ಮೆಲ್ಲಾ ಕೆಲಸಗಳು ಸಕ್ಸಸ್​ ಆಗುತ್ತೆ

ಬುಧವಾರ ಈ ಕೆಲಸಗಳನ್ನ ಮಾಡಿ, ನಿಮ್ಮೆಲ್ಲಾ ಕೆಲಸಗಳು ಸಕ್ಸಸ್​ ಆಗುತ್ತೆ

ಹಿಂದೂ ಧರ್ಮದಲ್ಲಿ ದೇವ ಗಣೇಶನಿಗೆ ಬಹಳ ಮುಖ್ಯವಾದ ಸ್ಥಾನವಿದೆ. ಎಲ್ಲಾ ರೀತಿಯ ಪೂಜೆ, ಶುಭ ಕಾರ್ಯಗಳಲ್ಲಿ ಗಣೇಶನನ್ನು ಮೊದಲು ಪೂಜಿಸಲಾಗುತ್ತದೆ. ಅದರಲ್ಲಿಯೂ ಬುಧವಾರದಂದು ಗಣೇಶನ ಆರಾಧನೆ ಮಾಡಲು ಪ್ರಶಸ್ತ ದಿನ ಎನ್ನಲಾಗುತ್ತದೆ. ಈ ದಿನ, ಭಕ್ತರು ಗಣೇಶನನ್ನು ಮೆಚ್ಚಿಸಲು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಗಣಪ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುವುದರ ಜೊತೆಗೆ, ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಬುಧನು ದುರ್ಬಲ ಸ್ಥಾನದಲ್ಲಿದ್ದರೆ, ಬುಧವಾರ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು ಎನ್ನಲಾಗುತ್ತದೆ. ಇದರ ಜೊತೆಗೆ ಯಾವುದೇ ರೀತಿಯ ಸಮಸ್ಯೆ ಬಂದರೂ ಕೂಡ ಅದಕ್ಕೆ ಪರಿಹಾರ ಕಂಡುಕೊಳ್ಳಲು ಕೆಲವು ವಿಶೇಷ ಸಲಹೆಗಳನ್ನು ಸೂಚಿಸಲಾಗಿದೆ, ಇದನ್ನು ನೀವು ಕೂಡ ಪ್ರಯತ್ನಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಗರಿಕೆ

ಗಣೇಶನಿಗೆ ಗರಿಕೆ ಎಂದರೆ ತುಂಬಾ ಪ್ರಿಯ ಎಂದು ನಂಬಲಾಗಿದೆ. ಹಾಗಾಗಿ ಬುಧವಾರ ಗಣೇಶನಿಗೆ ಪೂಜೆ ಮಾಡುವಾಗ ಗರಿಕೆಯನ್ನು ತಪ್ಪದೇ ಅರ್ಪಿಸಬೇಕು. ಅಥವಾ ಮನೆಯ ಬಳಿ ಗಣಪತಿ ದೇವಸ್ಥಾನ ಇರುವವರು, ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ದೇವಾಲಯಕ್ಕೆ ಹೋಗಿ ಗಣೇಶನ ಪಾದದ ಬಳಿ 11 ಅಥವಾ 21 ಗರಿಕೆ ಇಟ್ಟು ಭಕ್ತಿಯಿಂದ ಮನಸ್ಸಿನಲ್ಲಿರುವ ಆಸೆಗಳನ್ನು ಬೇಡಿಕೊಳ್ಳಿ. ಬಳಿಕ ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಎಲ್ಲಾ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತದೆ. ನೀವು ಬುಧವಾರ ಗಣೇಶನನ್ನು ಪೂಜಿಸಲು ದೇವಾಲಯಕ್ಕೆ ಹೋದಾಗ, ಹಸಿರು ಬಟ್ಟೆಗಳನ್ನು ಧರಿಸಿ. ಏಕೆಂದರೆ ಹಸಿರು ಬಣ್ಣ ಗಣೇಶನಿಗೆ ತುಂಬಾ ಪ್ರಿಯವೆಂದು ಪರಿಗಣಿಸಲಾಗುತ್ತದೆ.

ಹೆಸರು ಕಾಳು

ಗಣೇಶನ ಆಶೀರ್ವಾದ ಪಡೆಯಲು ಮತ್ತು ಜಾತಕದಲ್ಲಿ ಬುಧ ಗ್ರಹವನ್ನು ಬಲಪಡಿಸಲು, ಹೆಸರು ಬೇಳೆಯನ್ನು ಅಕ್ಕಿಯೊಂದಿಗೆ ಬೆರೆಸಿ ದಾನ ಮಾಡಬೇಕು. ಈ ಹೆಸರು ಬೇಳೆಯನ್ನು ನೀವು ಅಡಿಗೆಯಲ್ಲಿ ಬಳಸಿಯೂ ಸೇವಿಸಬಹುದು. ಬುಧವಾರ ಹೆಸರು ಕಾಳನ್ನು ಮೊಳಕೆಯೊಡೆಸಿ ಪಕ್ಷಿಗಳಿಗೆ ತಿನ್ನಲು ಕೊಡುವ ಮೂಲಕ, ಗಣೇಶನ ಆಶೀರ್ವಾದವನ್ನು ಸಹ ಪಡೆಯಬಹುದು. ಜೊತೆಗೆ ಈ ದಿನ ಬಡವರಿಗೆ ಹೆಸರು ಕಾಳು ದಾನ ಮಾಡುವ ಮೂಲಕ ಅಥವಾ ಬುಧವಾರ ದೇವಾಲಯಕ್ಕೆ ಹೋಗುವ ಮೂಲಕ, ಜಾತಕದಲ್ಲಿ ಬುಧ ಗ್ರಹದಿಂದ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.

ಬುಧ ದೋಷ

ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹವು ದುರ್ಬಲವಾಗಿದ್ದರೆ, ಪಿತೃ ದೋಷದಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಇದನ್ನು ತಡೆಯಲು ಪ್ರತಿದಿನ ಮನೆಯಲ್ಲಿ ಗಣೇಶನನ್ನು ಪೂಜೆ ಮಾಡಿ. ಹೀಗೆ ಮಾಡುವುದರಿಂದ ಜಾತಕ ದೋಷ ನಿವಾರಣೆಯಾಗುತ್ತದೆ. ಜೊತೆಗೆ ಮನೆಯಲ್ಲಿ ಯಾವುದೇ ರೀತಿಯ ಕೌಟುಂಬಿಕ ಸಮಸ್ಯೆಗಳಿದ್ದಲ್ಲಿ ಪರಿಹಾರವಾಗುತ್ತದೆ. ಹಾಗಾಗಿ ಗಣೇಶನ ಮೂರ್ತಿ ಅಥವಾ ಫೋಟೋ ಇಟ್ಟು ಪ್ರತಿದಿನ ಭಕ್ತಿಯಿಂದ ಪೂಜೆ ಮಾಡಿ.

ಹೆಚ್ಚಿನ ಸುದ್ದಿ