ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದು, ಈ ಮಧ್ಯೆ ಅನೇಕರು ದರ್ಶನ್ ಬೆಂಬಲಿಸಿದರೆ ಇನ್ನೂ ಹಲವರು ದರ್ಶನ್ ವಿರುದ್ಧ ಧ್ವನಿ ಎತ್ತಿದ್ದಾರೆ.
ಇದೀಗ ತೆಲುಗು ನಟ ನಾಗ ಶೌರ್ಯ ದರ್ಶನ್ ಬೆಂಬಲಿಸಿದ್ದಾರೆ. ರೇಣುಕಾಸ್ವಾಮಿಗೆ ಯಾವ ರೀತಿಯಲ್ಲಿ ಟಾರ್ಚರ್ ನೀಡಲಾಗಿತ್ತು ಎನ್ನುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದರ ನಡುವೆಯೂ ನಟ ನಾಗ ಶೌರ್ಯ ದರ್ಶನ್ ಪರ ನಿಂತಿದ್ದಾರೆ. ಇವರು ದರ್ಶನ್ ಪರ ನಿಂತ ಮೊದಲ ತೆಲುಗು ಹೀರೋ ಆಗಿದ್ದಾರೆ.
ಈ ಬಗ್ಗೆ ನಾಗ ಶೌರ್ಯ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ‘ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಕೇಳಿದಾಗ ನನ್ನ ಹೃದಯವು ಮರುಗುತ್ತದೆ. ಈ ಕಷ್ಟದ ಸಮಯದಲ್ಲಿ ಅವರಿಗೆ ದೇವರು ಶಕ್ತಿ ನೀಡಲಿ. ಈ ವಿಷಯದಲ್ಲಿ ಜನರು ಈಗಲೇ ತೀರ್ಮಾನಗಳಿಗೆ ಬರುತ್ತಿರುವುದನ್ನು ನೋಡುವುದು ಕಷ್ಟವಾಗುತ್ತದೆ. ಅಣ್ಣ ಕೆಟ್ಟ ಕನಸಿನಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲʼ.
‘ದರ್ಶನ್ ಗೆ ಅವರ ಉದಾರತೆ, ಸಹೃದಯ ಸ್ವಭಾವ ಮತ್ತು ಸಹಾಯ ಮಾಡುವ ಗುಣ ಇದೆ. ಅವರು ಯಾವಾಗಲೂ ಅಗತ್ಯವಿರುವವರ ಸಹಾಯಕ್ಕೆ ಧಾವಿಸುತ್ತಾರೆ. ದರ್ಶನ್ ಅನೇಕರಿಗೆ ಶಕ್ತಿಯ ಆಧಾರಸ್ತಂಭವಾಗಿದ್ದಾರೆ’ ಎಂದು ನಾಗ ಶೌರ್ಯ ಬರೆದುಕೊಂಡಿದ್ದಾರೆ.