ಬೆಂಗಳೂರು : ತಂದೆ ಮಗನ ನಡುವೆ ನಡೆದ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಂಜನ್ ಕುಮಾರ್ (27) ಮೃತ ಯುವಕನಾಗಿದ್ದು ತಂದೆ ವೆಂಕಟೇಶ್(57) ನನ್ನು ಪೊಲೀಸರು ಬಂಧಿಸಿದ್ದಾರೆ.
ಡಿ ಗ್ರೂಪ್ ಲೇಔಟ್ ನ ಮುದ್ದನಪಾಳ್ಯದಲ್ಲಿ ವೆಂಕಟೇಶ್ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡಿಕೊಂಡಿದ್ದರು. ವೆಂಕಟೇಶ್ ಗೆ ಅಂಜನ್ ಹಾಗೂ ಓರ್ವ ಮಗಳಿದ್ದು ಮಗಳಿಗೆ ದ್ವಿಚಕ್ರ ವಾಹನ ಕೊಡಿಸಿದ್ದರು. ಭಾನುವಾರ ಸಂಜೆ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಿದ್ದ ಅಂಜನ್ ಸಂಜೆ ವಾಹನ ತರದೆ ಮನೆಗೆ ಬಂದಿದ್ದ. ಸೋಮವಾರ ಬೆಳಗ್ಗೆ ಈ ಬಗ್ಗೆ ಮಗ ಅಂಜನ್ ನನ್ನು ವೆಂಕಟೇಶ್ ಪ್ರಶ್ನಿಸಿದ್ದರು.
ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಜೋರಾಗಿ ಅಂಜನ್ ಹೆಲ್ಮೆಟ್ ನಿಂದ ತಂದೆಗೆ ಹಲ್ಲೆ ಮಾಡಿದ್ದ. ಕುಪಿತಗೊಂಡ ವೆಂಕಟೇಶ್ ಅಡುಗೆ ಮನೆಯಲ್ಲಿದ್ದ ಚಾಕು ತಂದು ಅಂಜನ್ ಎದೆಯ ಎಡಭಾಗದಲ್ಲಿ ಇರಿದಿದ್ದರು. ತೀವ್ರ ರಕ್ತಸ್ರಾವವಾಗಿ ಅಂಜನ್ ಸಾವನ್ನಪ್ಪಿದ್ದ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.