ಬೆಂಗಳೂರು: ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಸದ್ಯ ಸಿಎಂ-ಡಿಸಿಎಂ ಸ್ಥಾನಕ್ಕೆ ಗುದ್ದಾಟ ನಡೆದಿದೆ. ಆದ್ದರಿಂದ ಮಳೆಗಾಲದ ಅಧಿವೇಶನ ಬಳಿಕ ಸಚಿವ ಸಂಪುಟಕ್ಕೆ ಸರ್ಜರಿ ಆಗುವ ಸಾಧ್ಯತೆ ಹೆಚ್ಚಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಹಿನ್ನೆಲೆ ಸಿಎಂ ಬಣದ ಟೀಂ ಮೇಲೆ ಅರೋಪ ಕೇಳಿಬರುತ್ತಿದ್ದು, ಸಚಿವರಾದ ಕೆ.ಎನ್.ರಾಜಣ್ಣ, ವೆಂಕಟೇಶ್, ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಚ್.ಸಿ ಮಹಾದೇವಪ್ಪ ಸೇರಿದಂತೆ 7 ಜನ ಸಚಿವರ ಕೈಬಿಡಲು ಒತ್ತಾಯಿಸಲಾಗಿದೆ. ಪರಮೇಶ್ವರ್, ಎಚ್ ಸಿ. ಮಹಾದೇವಪ್ಪ, ಸತೀಶ್ ಜಾರಕಿಹೊಳಿ ಖಾತೆ ಬದಲಿಸಲು ಪಕ್ಷದಲ್ಲಿ ಚಿಂತನೆ ನಡೆಯುತ್ತಿದೆ.
ಟಿ.ಬಿ.ಜಯಚಂದ್ರ, ಎಂ.ಕೃಷ್ಣಪ್ಪ ಸೇರಿದಂತೆ ನಾಲ್ಕೈದು ಹಿರಿಯರಿಗೆ ಸಂಪುಟದಲ್ಲಿ ಆದ್ಯತೆ ನೀಡಬೇಕು ಎಂದು ವಿರೋಧಿಗಳ ವಿರುದ್ದ ಡಿ ಕೆ ಶಿವಕುಮಾರ್ ಅಸ್ತ್ರ ಪ್ರಯೋಗ ಮಾಡಿದ್ದಾರೆ.
ಲೋಕಸಭಾ ಬಜೆಟ್ ಮತ್ತು ಮಳೆಗಾಲದ ವಿಧಾನಮಂಡಲ ಅಧಿವೇಶನ ಬಳಿಕ ಸಚಿವ ಸಂಪುಟಕ್ಕೆ ಸರ್ಜರಿ ಸಾಧ್ಯತೆ ಇದ್ದು, ಸದ್ಯ ಲೋಕಸಭಾ ಅಧಿವೇಶನ ಹಿನ್ನೆಲೆ, ಯಾವುದೇ ಬದಲಾವಣೆ ಬೇಡ ಎಂದು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬಂದಿದೆ.
ಉಪ ಚುನಾವಣೆಗಳ ನಂತರ ಸಂಪುಟ ಪುನರ್ ರಚನೆಗೆ ಹೈಕಮಾಂಡ್ ನಾಯಕರ ಒಲವು ಮೂಡಿದೆ. ಅಲ್ಲಿಯವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕಮಾಂಡ್ ನಾಯಕರು ಸೂಚನೆ ನೀಡಿದ್ದಾರೆ.
ಬಣ ರಾಜಕೀಯ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಸದ್ಯ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದೆ. ನಾಯಕರ ಅಭಿಪ್ರಾಯ ಆಲಿಸಿದ ಬಳಿಕವೇ ಮೇಜರ್ ಸರ್ಜರಿಗೆ ಕಾಂಗ್ರೆಸ್ ತೀರ್ಮಾನ ತೆಗೆದುಕೊಳ್ಳಲಿದೆ.
ಸದ್ಯ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ನಾಯಕರು ಅಧಿವೇಶನದಲ್ಲಿ ಬ್ಯೂಜಿ ಆಗಿದ್ದಾರೆ. ಜುಲೈ 15ರಿಂದ ಕರ್ನಾಟಕ ವಿಧಾನ ಮಂಡಳ ಅಧಿವೇಶನ ಪ್ರಾರಂಭವಾಗಲಿದೆ. ಅಧಿವೇಶನದ ಬಳಿಕ ಸಿದ್ದರಾಮಯ್ಯ ಸರ್ಕಾರದಲ್ಲಿ ಮೇಜರ್ ಸರ್ಜರಿ ಸಾಧ್ಯತೆ ಇದೆ ಎನ್ನಲಾಗುತ್ತಿದೆ.