ಲಕ್ನೋ: 18 ವರ್ಷಗಳ ಹಿಂದೆ ಕಳೆದು ಹೋಗಿದ್ದ ಸಹೋದರನನ್ನು ಆತನ ಸಹೋದರಿ ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಪತ್ತೆ ಹಚ್ಚಿರುವಂತಹ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 18 ವರ್ಷಗಳ ಬಳಿಕ ಸಹೋದರ ಹಾಗೂ ಸಹೋದರಿ ಒಂದಾಗಿದ್ದಾರೆ.
ಹಾಥಿಪುರ ಗ್ರಾಮದ ನಿವಾಸಿ ರಾಜ್ಕುಮಾರಿ ಅವರು ಇನ್ಸ್ಟಾಗ್ರಾಮ್ ರೀಲ್ಗಳನ್ನು ಸ್ಕ್ರೋಲ್ ಮಾಡುತ್ತಿದ್ದಾಗ ಪರಿಚಿತ ಎನಿಸುವ ವ್ಯಕ್ತಿಯ ಮುಖ ಕಂಡುಬಂದಿತ್ತು. ಆತನ ಹಲ್ಲೊಂದು ಮುರಿದಿದ್ದನ್ನು ಗಮಿಸಿದ ಆಕೆ ತನ್ನ ಬಾಲ್ಯದಲ್ಲಿ ಕಳೆದು ಹೋಗಿದ್ದ ಸಹೋದರ ಬಾಲ ಗೋವಿಂದ್ನದ್ದು ಕೂಡಾ ಇದೇ ರೀತಿ ಹಲ್ಲಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾಳೆ.
18 ವರ್ಷಗಳ ಹಿಂದೆ ಬಾಲ ಗೋವಿಂದ್ ಫತೇಪುರ್ನ ಇನಾಯತ್ಪುರ ಗ್ರಾಮದಿಂದ ಮುಂಬೈಗೆ ಉದ್ಯೋಗಕ್ಕಾಗಿ ತೆರಳಿದ್ದ ಆದರೆ ಹಿಂತಿರುಗಿರಲಿಲ್ಲ. ಕ್ರಮೇಣ ಆತ ತನ್ನ ಕುಟುಂಬ ಹಾಗೂ ಸ್ನೇಹಿತರಿಂದ ಎಲ್ಲಾ ಸಂಪರ್ಕಗಳನ್ನು ಕಳೆದುಕೊಂಡಿದ್ದ. ಆತ ಅನಾರೋಗ್ಯಕ್ಕೆ ಒಳಗಾದಾಗ ಮನೆಗೆ ಮರಳಲು ರೈಲು ಹತ್ತಲು ನಿರ್ಧರಿದ್ದ. ಆದರೆ ರೈಲು ಆತನನ್ನು ಕಾನ್ಪುರದ ಬದಲಿಗೆ ಜೈಪುರಕ್ಕೆ ಕರೆದೊಯ್ದಿತ್ತು.
ದಣಿದಿದ್ದ ಬಾಲ ಗೋವಿಂದ್ ರೈಲ್ವೆ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿಯನ್ನು ಭೇಟಿಯಾದ. ಬಳಿಕ ಆತನ ಆರೋಗ್ಯ ಸುಧಾರಿಸಿದ್ದ, ಆತನಿಗೆ ಅಲ್ಲೇ ಕಾರ್ಖಾನೆಯಲ್ಲಿ ಕೆಲಸ ಸಿಕ್ಕಿತು. ಕ್ರಮೇಣ ಆತನ ಸ್ಥಿತಿ ಸುಧಾರಿ ಜೈಪುರದಲ್ಲೇ ನೆಲೆ ನಿಂತ. ಈಶ್ವರ ದೇವಿ ಎಂಬ ಹುಡುಗಿಯನ್ನು ವಿವಾಹವಾದ. ಅವರಿಗೆ ಇಬ್ಬರು ಮಕ್ಕಳಿದ್ದರು. ಎಲ್ಲವೂ ಬದಲಾದರೂ ಬಾಲ ಗೋವಿಂದ್ನ ಮುರಿದಿದ್ದ ಹಲ್ಲು ಮಾತ್ರ ಹಾಗೆಯೇ ಇತ್ತು.
ಬಾಲ ಗೋವಿಂದ್ ಮಾಡಿದ್ದ ಇತ್ತೀಚಿನ ಇನ್ಸ್ಟಾಗ್ರಾಮ್ ರೀಲ್ಸ್ ಆತನ ದೂರದಲ್ಲಿರುವ ಸಹೋದರಿಗೆ ಸಿಕಿದ್ದು, ಆತ ತನ್ನ ಸಹೋದರ ಹೌದೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾತುಕತೆ ನಡೆಸಿದ್ದಾರೆ. ಪರಸ್ಪರರ ಬಾಲ್ಯದ ನೆನಪುಗನ್ನು ಹಂಚಿಕೊಂಡಾಗ ಇಬ್ಬರೂ ಸಹೋದರ ಸಹೋದರಿಯರು ಎಂಬುದು ಖಚಿತವಾಗಿದೆ.
ಬಳಿಕ ರಾಜ್ಕುಮಾರಿ ಫೋನ್ ಕರೆಯಲ್ಲಿ ಮಾತನಾಡಿ ಸಹೋದರನನ್ನು ಮನೆಗೆ ವಾಪಸಾಗುವಂತೆ ಕೇಳಿಕೊಂಡಿದ್ದಾಳೆ. ಬಾಲ ಗೋವಿಂದ್ ತಕ್ಷಣ ಇದನ್ನು ಒಪ್ಪಿಕೊಂಡಿದ್ದಾನೆ. ಜೂನ್ 20 ರಂದು ಗೋವಿಂದ್ ಹಾಥಿಪುರಕ್ಕೆ ಆಗಮಿಸಿ 18 ವರ್ಷಗಳಿಂದ ದೂರವಾಗಿದ್ದ ಸಹೋದರಿಯನ್ನು ಮತ್ತೆ ಕೂಡಿದ್ದಾರೆ. ಈ ಭಾವನಾತ್ಮಕ ಮಿಲನಕ್ಕೆ ಕುಟುಂಬದ ಸದಸ್ಯರು ಸಾಕ್ಷಿಯಾಗಿದ್ದಾರೆ.