ನವದೆಹಲಿ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ನಿನ್ನೆ ಲೋಕಸಭಾ ಅಧಿವೇಶನದಲ್ಲಿ ಮಾಡಿದ ಭಾಷಣದ ಬಗ್ಗೆ ಈಗ ಭಾರೀ ಚರ್ಚೆಯಾಗುತ್ತಿದೆ.
ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಇಸ್ಲಾಂ ಧರ್ಮದಲ್ಲೂ ಅಭಯ ಮುದ್ರೆಯಿದೆ. ಅವರು ಪ್ರಾರ್ಥನೆ ವೇಳೆ ಅದನ್ನು ಬಳಸುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಹೇಳಿಕೆಯನ್ನು ಅಲ್ಲಗಳೆದಿರುವ ಅಖಿಲ ಭಾರತ ಸೂಫಿ ಸಜ್ಜದ್ ನಾಶಿನ್ ಕೌನ್ಸಿಲ್ನ ಅಧ್ಯಕ್ಷ ಸೈಯದ್ ನಾಸೆರುದ್ದೀನ್ ಚಿಶ್ತಿ ಅವರು, ಹಿಂದೂ ದೇವರು ಮತ್ತು ದೇವತೆಗಳ ಚಿತ್ರಗಳಲ್ಲಿ ಕಂಡುಬರುವ ‘ಅಭಯ ಮುದ್ರೆ’ಯನ್ನು ಇಸ್ಲಾಂ ಪಾಲಿಸುವುದಿಲ್ಲ. ರಾಹುಲ್ ಗಾಂಧಿ ಹೇಳಿದ ವ್ಯಾಖ್ಯಾನ ತಪ್ಪಾಗಿದೆ ಎಂದಿದ್ದಾರೆ.
ಇಸ್ಲಾಂನಲ್ಲಿ ಮೂರ್ತಿ ಪೂಜೆಯ ಪ್ರಸ್ತಾಪವಿಲ್ಲ. ಯಾವುದೇ ರೀತಿಯ ಮುದ್ರೆಯನ್ನು ನಾನು ಸರಿಯಿಲ್ಲ ಎಂದು ಹೇಳುವುದಿಲ್ಲ, ಆದರೆ ಇಸ್ಲಾಂನಲ್ಲಿ ‘ಅಭಯ ಮುದ್ರೆ’ಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಹಾಗಾಗಿ ರಾಹುಲ್ ಗಾಂಧಿ ಅವರು ತಮ್ಮ ಹೇಳಿಕೆಯನ್ನು ಸರಿಪಡಿಸಬೇಕು ಎಂದಿದ್ದಾರೆ.ಸೋಮವಾರದ ಭಾಷಣದಲ್ಲಿ ರಾಹುಲ್ ಗಾಂಧಿ ಸುದೀರ್ಘ ಭಾಷಣ ಮಾಡಿ, ಹಿಂದೂ ಧರ್ಮ, ಆರ್ ಎಸ್ ಎಸ್, ಬಿಜೆಪಿ ಸೇರಿ ಹಲವು ವಿಷಯಗಳ ಬಗ್ಗೆ ಭಾಷಣ ಮಾಡಿದ್ದರು.
ಈ ವೇಳೆ ಎಲ್ಲಾ ಧರ್ಮಗಳಲ್ಲೂ ಉತ್ತಮ ಅಂಶಗಳಿವೆ ಎನ್ನುವ ಧಾಟಿಯಲ್ಲಿ ಮಾತನಾಡುವ ಸಂದರ್ಭ ಅಭಯಮುದ್ರೆ ಬಗ್ಗೆಯೂ ಹೇಳಿದ್ದರು.