ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ನಟನೆಯ ಹೊಸ ಚಿತ್ರ ಬಿಡುಗಡೆಯಾಗಲು ರೆಡಿಯಾಗಿದೆ.
ನಿರ್ದೇಶಕ ಎಂ ಶಶಿಧರ್ ಕಲ್ಪನೆಯಲ್ಲಿ ಮೂಡಿಬರುತ್ತಿರುವ ಅಜಾಗ್ರತ ಚಿತ್ರ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ನಿರ್ಮಾಪಕ ರವಿರಾಜ್ ಈ ಸಿನಿಮಾಕ್ಕೆ ಬಂಡವಾಳ ಹಾಕಿದ್ದು, ತೆಲುಗು, ಕನ್ನಡ ಸೇರಿದಂತೆ 7 ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.
ಸಿನಿದುನಿಯಾದಿಂದ ಕೊಂಚ ದೂರವೇ ಉಳಿದಿರುವ ರಾಧಿಕಾ ಕುಮಾರಸ್ವಾಮಿ ಆಗೊಂದು ಈಗೊಂದು ಸಿನಿಮಾಗಳನ್ನು ಮಾಡುತ್ತಿದ್ದಾರೆ.
ಈ ಸಿನಿಮಾದಲ್ಲಿ ದೊಡ್ಡ ತಾರಾ ಬಣವೇ ಇದ್ದು, ರಾಧಿಕಾ ಕುಮಾರಸ್ವಾಮಿ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಬಾಲಿವುಡ್ ಖ್ಯಾತ ನಟ ಶ್ರೇಯಸ್ ತಲ್ಪಾಡೆ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೆಸರಾಂತ ನಟ ಬಾಬಿ ಸಿಂಹ ಸೇರಿದಂತೆ ರಾವ್ ರಮೇಶ್, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಪಾತ್ರವಹಿಸಿದ್ದಾರೆ.
ಸದ್ಯ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಚಿತ್ರದ ರಫ್ ಕಾಪಿ ಹೊರ ಬಂದಿದೆ. ಶ್ರೀಹರಿ ಸಂಗೀತ ನಿರ್ದೇಶನ ಹಾಗೂ ರವಿವರ್ಮ ಸಾಹಸ ನಿರ್ದೇಶನ ಈ ಚಿತ್ರಕ್ಕಿದ್ದು, ಸದ್ಯದಲ್ಲೇ ಅಜಾಗ್ರತ ಚಿತ್ರ ತೆರೆಗೆ ಬರಲು ಸಿದ್ಧತೆ ನಡೆಸಿದೆ.
ನಿರ್ಮಾಪಕರಿಂದ ಕಾರ್ ಉಡುಗೊರೆ: ಅಜಾಗ್ರತ ಚಿತ್ರ ಬಿಡುಗಡೆಗೆ ಮುನ್ನವೇ ನಿರ್ಮಾಕರು ನಿರ್ದೇಶಕರಿಗೆ ಅರ್ಧ ಕೋಟಿ ಬೆಲೆ ಬಾಳುವ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ನಟಿ ರಾಧಿಕಾ ಸಹೋದರರಾಗಿರುವ ನಿರ್ಮಾಪಕ ರವಿರಾಜ್ ನಿರ್ದೇಶಕರ ಕೆಲಸವನ್ನು ಬಹಳ ಮೆಚ್ಚಿಕೊಂಡಿದ್ದಾರೆ.