ನವದೆಹಲಿ: ಇಸ್ಲಾಂನಲ್ಲಿ ‘ಅಭಯಮುದ್ರಾ’ ಇಲ್ಲ ಎಂದು ಹೇಳುವ ಮೂಲಕ ಗಡ್ಡಿ ನಶಿನ್-ದರ್ಗಾ ಅಜ್ಮೀರ್ ಷರೀಫ್ ನ ಹಾಜಿ ಸೈಯದ್ ಸಲ್ಮಾನ್ ಚಿಶ್ಟಿ ಅವರು ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ಸಂಬಂಧ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇಸ್ಲಾಮಿಕ್ ಪ್ರಾರ್ಥನೆಗೆ ‘ಅಭಯಮುದ್ರಾ’ ಚಿಹ್ನೆಯನ್ನು ಜೋಡಿಸುವ ಬಗ್ಗೆ ಹಾಜಿ ಸೈಯದ್ ಸಲ್ಮಾನ್ ಚಿಶ್ಟಿ ಕಳವಳ ವ್ಯಕ್ತಪಡಿಸಿದ್ದಾರೆ. ಇಸ್ಲಾಂ ಧರ್ಮದಲ್ಲಿ ಅಭಯಮುದ್ರಾ ಪರಿಕಲ್ಪನೆ ಇಲ್ಲ. ಸಂಬಂಧಿಸಿದ ಧರ್ಮಗ್ರಂಥಗಳಾಗಲಿ, ಸಂತರ ವಾಣಿಗಳಲ್ಲಾಗಲಿ ಈ ಬಗ್ಗೆ ಉಲ್ಲೇಖವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಸಂಸತ್ನಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿಯವರು ಇಸ್ಲಾಂನಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಕೆಲವರು ಎರಡೂ ಕೈಗಳನ್ನು ಜೋಡಿಸಿ ಅಭಯ ಮುದ್ರಾವನ್ನು ಸಂಕೇತಿಸುತ್ತಾರೆ ಎಂದು ಹೇಳಿರುವುದಕ್ಕೆ ಹಾಜಿ ಸೈಯದ್ ಸಲ್ಮಾನ್ ಚಿಶ್ಟಿ ಈ ಪ್ರತಿಕ್ರಿಯೆ ನೀಡಿದ್ದಾರೆ.
‘ಅಭಯಮುದ್ರಾ’ ಧೈರ್ಯ ಮತ್ತು ಸುರಕ್ಷತೆಯ ಸೂಚಕ. ಇದು ಭಯವನ್ನು ಹೋಗಲಾಡಿಸುತ್ತದೆ. ದೈವಿಕ ರಕ್ಷಣೆ ಮತ್ತು ಆನಂದವನ್ನು ನೀಡುತ್ತದೆ ಎಂಬುದು ಹಿಂದೂ ಧರ್ಮದಲ್ಲಿರುವ ನಂಬಿಕೆಯಾಗಿದೆ.