ಬೆಂಗಳೂರು : ಮುಡಾದಲ್ಲಿ ನಡೆದಿದೆ ಎನ್ನಲಾದ ಜಮೀನು ಹಂಚಿಕೆ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಖಾರವಾಗಿ ತಿರುಗೇಟು ನೀಡಿದ್ದು, ಸೈಟ್ ಹಂಚಿಕೆ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುವ ಬಿಜೆಪಿಯವರು ಕಾನೂನು ಪ್ರಕಾರ ತಮಗೆ 62 ಕೋಟಿ ರೂಪಾಯಿ ಪರಿಹಾರ ನೀಡಲಿ ಎಂದು ಹೇಳಿದ್ದಾರೆ.
ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರಿಗೆ ಯಾವುದೇ ವಿಷಯವಿಲ್ಲ. ಬಿಜೆಪಿಗರು ಆರ್ ಎಸ್ ಎಸ್ ಹೇಳಿದಂತೆ ಕೇಳುತ್ತಾರೆ. ನಮಗೆ ಸೇರಿದ 3.16 ಎಕರೆ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ.
50:50 ಅನುಪಾತದಲ್ಲಿ ಜಾಗ ಕೊಡಿ ಎಂದು ಮುಡಾಗೆ ಆಗ ಹೇಳಿದ್ದೆವು. ಇಂತಹ ಜಾಗದಲ್ಲಿ ಸೈಟ್ ಕೊಡಿ ಎಂದು ನಾವು ಹೇಳಿರಲಿಲ್ಲ. 2021 ರಲ್ಲಿ ಜಾಗ ಕೊಟ್ಟಾಗ ಬಿಜೆಪಿಯೇ ಅಧಿಕಾರದಲ್ಲಿತ್ತು. ಇದೀಗ ಅವರೇ ಆರೋಪ ಸುಳ್ಳು ಆರೋಪ ಮಾಡಿದರೆ ಹೇಗೆ ಎಂದು ಸಿಎಂ ಪ್ರಶ್ನಿಸಿದ್ದಾರೆ.