ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರ ಮಗ ಸುನಿಲ್ ಬೋಸ್ ತನ್ನ ಸಹಚರರಿಂದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಅವರನ್ನು ಕೊಲೆ ಮಾಡಿಸಿದ್ದಾರೆ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದ್ದಾರೆ. ಮಂಗಳವಾರ ಮಹಾಲಕ್ಷ್ಮಿ ಲೇಔಟ್ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹತ್ಯೆಗೀಡಾದ ಜೈನಮುನಿ ಮತ್ತು ಯುವ ಬ್ರಿಗೇಡ್ ಸದಸ್ಯ ವೇಣುಗೋಪಾಲ್ ಸಂತಾಪ ಸೂಚಕ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಮತ ಚಲಾಯಿಸಿದ ಇಂಕ್ ಇನ್ನೂ ಆರಿಲ್ಲ!
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಚುನಾವಣೆಯಲ್ಲಿ ಮತ ಚಲಾಯಿಸಿದ ಇಂಕ್ ಇನ್ನೂ ಆರಿಲ್ಲ ಆಗಲೇ ಕೊಲೆಗಳು ನಡೆಯಲು ಶುರುವಾಗಿದೆ. ವೇಣುಗೋಪಾಲ್ ದಲಿತ ಸಮುದಾಯದ ಹುಡುಗನಾಗಿದ್ದ. ಅವನ ಬೆಳವಣಿಗೆಯನ್ನು ಸಹಿಸದೇ ಕೊಲೆ ಮಾಡಿಸಲಾಗಿದೆ ಎಂದು ಆರೋಪಿಸಿದರು.
ಮಹದೇವಪ್ಪ ಸಹಚರರಿಂದಲೇ ಕೃತ್ಯ!
ಮೃತ ವೇಣುಗೋಪಾಲ್ ಮನೆಯವರು ಮತ್ತು ಸ್ನೇಹಿತರು ಹೇಳುವ ಪ್ರಕಾರ ಸಚಿವ ಮಹಾದೇವಪ್ಪ ಸಹಚರರೇ ಈ ಕೃತ್ಯ ಎಸಗಿದ್ದಾರೆ ಪೊಲೀಸರು ಬಂಧಿಸಿರುವ ಆರು ಮಂದಿಯ ಮೂಲ ಕೆದಕಿದರೆ ಕಾಂಗ್ರೆಸ್ ಬೆಂಬಲ ಇರುವುದು ಕಂಡು ಬಂದಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅಹಿಂದ ಮತಗಳಿಂದ ಅಧಿಕಾಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಇಂದು ಒಬ್ಬ ದಲಿತ ಹತ್ಯೆಯಾದರೂ ಮಾತನಾಡುತ್ತಿಲ್ಲ. ಅವರ ಕುಟುಂಬಕ್ಕೆ ಸಾಂತ್ವನ ಹೇಳಬೇಕೆಂದೂ ಸಿದ್ದರಾಮಯ್ಯನವರಿಗೆ ಅನಿಸುತ್ತಿಲ್ಲ ಎಂದು ಸೂಲಿಬೆಲೆ ಹರಿಹಾಯ್ದರು.