ಲಕ್ನೋ: ಕಳೆದ ಎರಡು ತಿಂಗಳಲ್ಲಿ ಐದು ಬಾರಿ ಹಾವು (snake) ಕಚ್ಚಿದ್ದರೂ ವ್ಯಕ್ತಿಯೊಬ್ಬ ಬದುಕುಳಿದ ಅಚ್ಚರಿಯ ಘಟನೆ ಉತ್ತರಪ್ರದೇಶದ (Uttar Pradesh) ಫತೇಹ್ ಪುರ್ನಲ್ಲಿ ನಡೆದಿದೆ.
ವಿಕಾಸ್ ದುಬೆ ಎಂಬಾತ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ. ಜೂನ್ 2ರಂದು ರಾತ್ರಿ ವಿಕಾಸ್ ದುಬೆ ಬೆಡ್ನಿಂದ ಮೇಲೇಳಬೇಕಾದ ಸಂದರ್ಭದಲ್ಲಿ ಈ ವಿಷಕಾರಿ ಹಾವು ಮೊದಲ ಬಾರಿಗೆ ಕಚ್ಚಿತ್ತು. ಕೂಡಲೇ ಮನೆಯವರು ದುಬೆಯನ್ನು ಖಾಸಗಿ ನರ್ಸಿಂಗ್ ಹೋಮ್ಗೆ ಕರೆದೊಯ್ದು ಎರಡು ದಿನಗಳ ಕಾಲ ಅಡ್ಮಿಟ್ ಮಾಡಿದ್ದು. ಚಿಕಿತ್ಸೆ ಪಡೆದ ನಂತರ ಮನೆಗೆ ವಾಪಸ್ ಆಗಿದ್ದ.
ಜೂನ್ 10ರ ರಾತ್ರಿ ಹಾವು ಮತ್ತೊಮ್ಮೆ ದುಬೆಗೆ ಕಚ್ಚಿತ್ತು. ಮತ್ತೆ ಮನೆಯವರು ಅದೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನಂತರ ಮನೆಗೆ ವಾಪಸ್ ಆಗಿತ್ತು. ಆದರೆ ಈ ವ್ಯಕ್ತಿಯ ಮನಸ್ಸಿನಲ್ಲಿ ಹಾವಿನ ಭಯ ತುಂಬಿ ಹೋಗಿದ್ದು, ಅದಕ್ಕಾಗಿ ಎಚ್ಚರದಿಂದ ಇರತೊಡಗಿದ್ದ.
ಸುಮಾರು ಏಳು ದಿನ ಬಿಟ್ಟು ಜೂನ್ 17ರಂದು ಮನೆಯಲ್ಲಿ ದುಬೆಗೆ ಮತ್ತೊಮ್ಮೆ ಹಾವು ಕಚ್ಚಿದ್ದು, ಪ್ರಜ್ಞಾಹೀನನಾಗಿದ್ದ ಆತನನ್ನು ಕುಟುಂಬ ಸದಸ್ಯರು ನರ್ಸಿಂಗ್ ಹೋಮ್ ಗೆ ದಾಖಲಿಸಿ, ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.
ನಾಲ್ಕನೇ ಬಾರಿಯೂ ವಿಕಾಸ್ ದುಬೆಗೆ ಅದೇ ಮನೆಯಲ್ಲಿ ಹಾವು ಕಚ್ಚಿದ್ದು, ಕುಟುಂಬ ಸದಸ್ಯರು ಅದೇ ಖಾಸಗಿ ನರ್ಸಿಂಗ್ ಹೋಮ್ನಲ್ಲಿ ಚಿಕಿತ್ಸೆ ಕೊಡಿಸಿದ್ದು, ಆಗ ವೈದ್ಯರೇ ಅಚ್ಚರಿಗೊಳಗಾಗಿ ನಾಲ್ಕು ಬಾರಿ ಹಾವು ಕಡಿದರೂ ಚಿಕಿತ್ಸೆ ಪಡೆದು ಬದುಕುಳಿದಿರುವುದು ಪವಾಡ ಎಂದು ಹೇಳಿರುವುದಾಗಿ ವರದಿ ವಿವರಿಸಿದೆ.
ಈ ಘಟನೆಯ ನಂತರ ವಿಕಾಸ್ ದುಬೆಯ ಸಂಬಂಧಿಗಳು ಹಾಗೂ ವೈದ್ಯರು, ಕೆಲವು ದಿನಗಳ ಕಾಲ ಮನೆ ಬಿಟ್ಟು ದೂರ ಇರುವಂತೆ ಸಲಹೆ ನೀಡಿದ್ದರು. ಹಾಗೆ ದುಬೆ ಫತೇಹ್ ಪುರ್ನ ರಾಧಾ ನಗರದಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸ್ತವ್ಯ ಹೂಡಿದ್ದ. ಆದರೂ ಐದನೇ ಬಾರಿಯೂ ಚಿಕ್ಕಮ್ಮನ ಮನೆಯಲ್ಲೂ ಹಾವು ಕಚ್ಚಿತ್ತು.
ಪ್ರತಿ ಬಾರಿಯೂ ಹಾವು ಕಡಿದಾಗ ವಿಕಾಸ್ ದುಬೆಗೆ ಚಿಕಿತ್ಸೆ ನೀಡಿದ್ದ ವೈದ್ಯರಾದ ಜವಾಹರಲಾಲ್ ಅವರು ಇದೊಂದು ವಿಚಿತ್ರ ಪ್ರಕರಣ ಎಂದು ತಿಳಿಸಿದ್ದು, ಇದೀಗ ದುಬೆ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.