ಅಲಹಬಾದ್ : ದೇಶದಲ್ಲಿ ನಡೆಯುತ್ತಿರುವ ಧಾರ್ಮಿಕ ಸಭೆಗಳ ಬಗ್ಗೆ ಅಲ್ಲಹಾಬಾದ್ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಸೋಮವಾರ ಈ ಕುರಿತು ಪ್ರತಿಕ್ರಿಯಿಸಿರುವ ನ್ಯಾ. ರೋಹಿತ್ ರಂಜನ್ ಅಗರವಾಲ್ ನೇತೃತ್ವದ ಪೀಠವು, ಇಂದು ಬಹುಸಂಖ್ಯಾತವಾಗಿರುವ ಧಾರ್ಮಿಕ ಸಮುದಾಯವು ಕ್ರಮೇಣ ಅಲ್ಪಸಂಖ್ಯಾತವಾಗುತ್ತಾ ಸಾಗಲಿದೆ ಎಂದು ಎಚ್ಚರಿಕೆಯ ಗಂಟೆ ಬಾರಿಸಿದೆ.
ಜೊತಗೆ, ಅಕ್ರಮವಾಗಿ ನಡೆಸುವ ಧಾರ್ಮಿಕ ಚಟುವಟಿಕೆಗಳಿಗೆ ಕೂಡಲೇ ದೇಶಾದ್ಯಂತ ಕಡಿವಾಣ ಹಾಕಬೇಕು ಎಂದು ಹೈಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ.
2021 ರ ಮತಾಂತರ ನಿಷೇಧ ಕಾಯಿದೆಯಡಿ ಉತ್ತರಪ್ರದೇಶ ಮೂಲದ ಕೈಲಾಶ್ ಎಂಬುವವರ ಪ್ರಕರಣದ ವಿಚಾರಣೆಯ ವೇಳೆ ಈ ಅಭಿಪ್ರಾಯ ಹೊರಬಿದ್ದಿದೆ. ದೆಹಲಿಯಲ್ಲಿ ಅಕ್ರಮ ಧಾರ್ಮಿಕ ಸಭೆಗಳು ನಡೆಯುತ್ತಿದೆ. ಅದರಲ್ಲಿ ಹಲವು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳೂ ಸೇರಿದಂತೆ ಸಾಕಷ್ಟು ಜನರು ಸೇರುತ್ತಿದ್ದಾರೆ. ಈ ಸಭೆಯಲ್ಲಿ ಮತಾಂತರದ ಬಗ್ಗೆ ಚರ್ಚೆ ನಡೆಯುತ್ತದೆ. ಅಷ್ಟೇ ಅಲ್ಲದೇ ಕ್ರೈಸ್ತ ಧರ್ಮದಲ್ಲಿ ನಂಬಿಕೆ ಹುಟ್ಟಿಸುವುದು ಹೇಗೆ ಮತ್ತು ಜನರನ್ನು ಸೆಳೆಯುವುದು ಹೇಗೆ ಎಂಬ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತಿದೆ ಎಂದು ಅರ್ಜಿದಾರರು ದೂರಿದ್ದರು.
ಆರೋಪಿಯ ಪರ ಜಾಮೀನು ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಾಧೀಶರು, ಪ್ರಸಕ್ತ ಪ್ರಕರಣದಲ್ಲಿ ಸಂವಿಧಾನದಲ್ಲಿ ಹೇಳಲ್ಪಟ್ಟಿರುವ ಧಾರ್ಮಿಕ ಸ್ವಾತಂತ್ರ್ಯದ ಕಾನೂನಿಗೆ ವಿರುದ್ದವಾಗಿದೆ. ಸಂವಿಧಾನದ 25 ನೇ ಪರಿಚ್ಛೇದವು (Article 25) ಪ್ರಜ್ಞಾವಂತಿಕೆಯ ಸ್ವಾತಂತ್ರ್ಯ, ಪೂಜಿಸುವ ಹಕ್ಕು, ಧರ್ಮಾಚರಣೆಯ ಸ್ವಾತಂತ್ರ್ಯಗಳ ಬಗ್ಗೆ ಹೇಳಿದೆಯೇ ಹೊರತು ಒತ್ತಾಯಪೂರ್ವಕ ಮತಾಂತರದ ಬಗ್ಗೆ ಎಲ್ಲಿಯೂ ಹೇಳಿಲ್ಲ ಎಂದರು. ಇದು ಕೇವಲ ಸಣ್ಣ ಘಟನೆಯಲ್ಲ. ಸಂಘಟಿತ ಪ್ರಯತ್ನದ ಮೂಲಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಡೆಯುವ ಮತಾಂತರ ಪ್ರಯತ್ನಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದೂ ಸಹ ನ್ಯಾಯಾಧೀಶರು ಹೇಳಿದರು.
ಉತ್ತರಪ್ರದೇಶದಲ್ಲಿ ವಂಚನೆ, ಒತ್ತಾಯ ಹಾಗೂ ಆಮಿಷದಿಂದ ಮಾಡುವ ಎಲ್ಲಾ ರೀತಿಯ ಮತಾಂತರಗಳನ್ನು ನಿಷೇಧಿಸಲಾಗಿದೆ.