ನವದೆಹಲಿ: ಆಫ್ರಿಕನ್ ರಾಷ್ಟ್ರ ಕೀನ್ಯಾದಲ್ಲಿ ಆಂತರಿಕ ಪ್ರತಿಭಟನೆಗಳು ನಡೆಯುತ್ತಿದ್ದು ಹಲವರು ಈ ವೇಳೆ ಸಾವನ್ನಪ್ಪಿದ್ದಾರೆ. ಸದ್ಯ ದೇಶಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕೀನ್ಯಾದಲ್ಲಿರುವ ಭಾರತೀಯ ಪ್ರಜೆಗಳು “ಅತೀವ ಎಚ್ಚರಿಕೆ” ಯಿಂದ ಇರಬೇಕು ಎಂದು ಭಾರತೀಯ ಹೈಕಮಿಷನ್ ಮಂಗಳವಾರ ಸಲಹೆ ನೀಡಿದೆ.
ಕೀನ್ಯಾದ ರಾಜಧಾನಿ ನೈರೋಬಿ ಮತ್ತು ದೇಶಾದ್ಯಂತ ಇತರ ನಗರಗಳು ಹಿಂಸಾತ್ಮಕ ಘರ್ಷಣೆಗಳು ಮತ್ತು ಪ್ರದರ್ಶನಗಳಿಗೆ ಸಾಕ್ಷಿಯಾಗಿವೆ. ಕೀನ್ಯಾ ಸಂಸತ್ತು ತೆರಿಗೆಗಳನ್ನು ಹೆಚ್ಚಿಸಲು ಪ್ರಸ್ತಾಪಿಸಿದ ವಿವಾದಾತ್ಮಕ ಮಸೂದೆಯನ್ನು ಅಂಗೀಕರಿಸಿದ ನಂತರ ಜನರು ಬೀದಿಗಿಳಿದು ಹಿಂಸಾಚಾರ ಆರಂಭಿಸಿದ್ದಾರೆ.
ಪ್ರಚಲಿತ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕೀನ್ಯಾದಲ್ಲಿರುವ ಎಲ್ಲಾ ಭಾರತೀಯರು ಅತ್ಯಂತ ಜಾಗರೂಕರಾಗಿರಲು ಸೂಚಿಸಲಾಗಿದೆ” ಎಂದು ಭಾರತೀಯ ಹೈಕಮಿಷನ್ ತನ್ನ ಸಲಹೆಯಲ್ಲಿ ತಿಳಿಸಿದೆ.
ಕೀನ್ಯಾದ ಸಂಸತ್ತಿಗೆ ಸಾವಿರಾರು ಉದ್ರಿಕ್ತರು ನುಗ್ಗಿ ಬೆಂಕಿ ಹಚ್ಚಿದ ನಂತರ ಪೊಲೀಸರು ಅಶ್ರುವಾಯು ಮತ್ತು ಲೈವ್ ರೌಂಡ್ಗಳನ್ನು ಬಳಸಿದ್ದರಿಂದ ನೈರೋಬಿಯಲ್ಲಿ ಕನಿಷ್ಠ ಐದು ಪ್ರತಿಭಟನಾಕಾರರು ಹತ್ಯೆಗೀಡಾಗಿದ್ದಾರೆ. 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಅಧಿಕೃತ ಅಂದಾಜಿನ ಪ್ರಕಾರ ಸುಮಾರು 20,000ಕ್ಕೂ ಅಧಿಕ ಭಾರತೀಯರು ಪ್ರಸ್ತುತ ಕೀನ್ಯಾದಲ್ಲಿ ವಾಸಿಸುತ್ತಿದ್ದಾರೆ