ಶಿವಮೊಗ್ಗ : ಆರಿದ್ರಾ ಮಳೆಯು ತೀರ್ಥಹಳ್ಳಿಯಲ್ಲಿ ಬಿಡದೆ ಸುರಿಯುತ್ತಿದ್ದು, ಭಾರೀ ಮಳೆಗೆ ಯಕ್ಷಗಾನ ಕಲಾವಿದ ನಂದನ್ ಶೆಟ್ಟಿ ಎಂಬುವವರಿಗೆ ಸೇರಿದ್ದ ಮನೆ ಕುಸಿದಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳು ಗ್ರಾಮದಲ್ಲಿ ಘಟನೆ ನಡೆದಿದ್ದು, ನಿನ್ನೆ ಮಂದಾರ್ತಿಯಲ್ಲಿ ಮೇಳದ ಯಕ್ಷಗಾನದಲ್ಲಿ ನಂದನ್ ಶೆಟ್ಟಿ ಭಾಗಿಯಾಗಿದ್ದರು.
ನಂದನ್ ಮೇಳಕ್ಕೆ ಹೋಗಿದ್ದರಿಂದ ಮನೆಯಲ್ಲಿ ತಾಯಿಯೊಬ್ಬರೆ ಇದ್ದರು, ಈ ವೇಳೆ ಮಳೆಗೆ ಗೋಡೆ ಕುಸಿದು ಬಂದಿದ್ದು, ತಕ್ಷಣ ತಾಯಿ ಭಾರತಿ ಮನೆಯಿಂದ ಹೊರ ಓಡಿ ಬಂದಿದ್ದಾರೆ.
ಮನೆಯ ಗೋಡೆ ಹಾಗೂ ಹಂಚು ಸೇರಿದಂತೆ ಮರದ ವಸ್ತುಗಳು ಕುಸಿದಿದ್ದು, ಅದೃಷ್ಟವಶಾತ್ ಸಾವುನೋವು ಸಂಭವಿಸಿಲ್ಲ. ಕೂಡಲೇ ಸ್ಥಳಕ್ಕೆ ಗ್ರಾಂ. ಪಂ ಅಧ್ಯಕ್ಷರು ಹಾಗೂ ಸ್ಥಳೀಯ ಯುವಕರು ಸಂತ್ರಸ್ತ ಕುಟುಂಬಕ್ಕೆ ನೆರವಾಗಿದ್ದಾರೆ