Sunday, July 7, 2024
Homeಟಾಪ್ ನ್ಯೂಸ್Channapattana By Poll : ಟೀಕೆಗಳು ಸಾಯುತ್ತವೆ.. ಕೆಲಸಗಳು ಉಳಿಯುತ್ತವೆ : ಡಿಕೆಶಿ

Channapattana By Poll : ಟೀಕೆಗಳು ಸಾಯುತ್ತವೆ.. ಕೆಲಸಗಳು ಉಳಿಯುತ್ತವೆ : ಡಿಕೆಶಿ

ರಾಮನಗರ : ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾವು ಪಡೆದುಕೊಂಡಿದ್ದು, ಜನ ಸಂಪರ್ಕ ಕಾರ್ಯಕ್ರಮದ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರು ಮತಗಳನ್ನು ಗಟ್ಟಿಗೊಳಿಸುತ್ತಿದ್ದಾರೆ.

ಚನ್ನಪಟ್ಟಣದ ಮಳೂರಿನಲ್ಲಿ ಇಂದು ಹಮ್ಮಿಕೊಂಡಿದ್ದ “ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ” ಜನ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ನಿಮ್ಮ ಜಿಲ್ಲೆಯ ಮಗ…ನಿಮ್ಮ ಸೇವೆಯೇ ನನಗೆ ಮುಖ್ಯ. ಚುನಾವಣೆ, ರಾಜಕಾರಣ ಶಾಶ್ವತವಲ್ಲ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಿಮಗೆ ಸೇವೆ ಮಾಡುವುದೇ ನನಗೆ ಮುಖ್ಯವೆಂದು ಹೇಳಿದರು.


ಅಧಿಕಾರಿಗಳನ್ನು ನಿಮ್ಮ ಮನೆ ಬಾಗಿಲಿಗೆ ಕರೆತಂದಿದ್ದೇನೆ. ನಿಮ್ಮ ಕ್ಷೇತ್ರಕ್ಕೆ ಏನೇನು ಬೇಕು, ಯಾವೆಲ್ಲಾ ಸಮಸ್ಯೆಗಳಿವೆ ಅಂತಾ ಪಟ್ಟಿ ಮಾಡಿಕೊಡಿ. ಎಲ್ಲಾ ತಾಲೂಕು ಕಚೇರಿಗಳಲ್ಲೂ ನಿಮ್ಮ ಸಮಸ್ಯೆಗಳ ಅರ್ಜಿ ಸ್ವೀಕರಿಸಲು ವ್ಯವಸ್ಥೆ ಮಾಡಿಸಿದ್ದೇನೆ. ಏನೇ ಸಮಸ್ಯೆಗಳಿದ್ದರೂ ಖುದ್ದು ನೀವು ನನ್ನನ್ನು ಭೇಟಿ ಮಾಡಿ ಎಂದು ಡಿಕೆಶಿ ಅವರು ತಿಳಿಸಿದರು.

ಚನ್ನಪಟ್ಟಣದಲ್ಲಿ ಸೈಟ್ ಇಲ್ಲದವರಿಗೆ ಸೈಟ್ ಹಾಗೂ ಮನೆ ಇಲ್ಲದವರಿಗೆ ಮನೆ ಕೊಡಿಸುವ ಕಾರ್ಯಕ್ರಮವನ್ನು ರೂಪಿಸಿ ಅದನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನನ್ನದು. ಜನಸಾಮಾನ್ಯರ ಸೇವೆಗೆ ನಮ್ಮ ಸರ್ಕಾರ ಸದಾ ಸಿದ್ಧವಾಗಿದೆ ಎಂದರು.

ಇನ್ನು ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಸಚಿವರಾದ ಬೆನ್ನಲ್ಲೇ, ಅವರು ಶಾಸಕರಾಗಿ ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ತೆರವಾಗಿದ್ದು, ಈ ಕ್ಷೇತ್ರಕ್ಕೆ ಉಪಚುನಾವಣೆಯ ನಡೆಯಲಿದ್ದು ಕಾಂಗ್ರೆಸ್ ಈಗಾಗಲೇ ಫುಲ್ ಆಕ್ಟಿವ್ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹೆಚ್ಚಿನ ಸುದ್ದಿ