ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಗವರ್ನರ್ ಸಿವಿ ಆನಂದ್ ಬೋಸೆ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಕೋಲ್ಕತಾ ಹೈಕೋರ್ಟ್ ಮುಂದೂಡಿದೆ. ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ಗವರ್ನರ್ ಪರ ವಾದ ಮಂಡಿಸಿದ್ದು, ವಿವಿಧ ಮಾಧ್ಯಮಗಳಲ್ಲಿ ಮಮತಾ ಬ್ಯಾನರ್ಜಿ ಮಾಡಿದ ಆರೋಪಗಳ ವರದಿಯನ್ನು ಪ್ರದರ್ಶಿಸಿದರು. ಇದರಿಂದ ಅಸಮಾಧಾನಗೊಂಡ ನ್ಯಾಯಾಧೀಶರು ಮಾಧ್ಯಮಗಳನ್ನು ಮೂರನೇ ಪಾರ್ಟಿ ಆಗಿ ಮಾಡುತ್ತಿದ್ದಿರಾ? ಮಾಧ್ಯಮಗಳ ವರದಿಯನ್ನು ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಗವರ್ನರ್ ಆನಂದ್ ಬೋಸೆ ಜೂನ್ 28ರಂದು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಕೋಲ್ಕತಾ ಹೈಕೋರ್ಟ್ ವಿಚಾರಣೆಗೆ ಬುಧವಾರ ಅಂಗೀಕರಿಸಿತು.
ರಾಜಭವನಕ್ಕೆ ಹೋಗಲು ಹೆದರಿಕೆ ಆಗುತ್ತದೆ. ಏಕೆಂದರೆ ಅಲ್ಲಿ ಪಕ್ಷದ ಕಾರ್ಯಕರ್ತರು ಇರುತ್ತಾರೆ ಎಂದು ಮಮತಾ ಬ್ಯಾನರ್ಜಿ ಜೂನ್ 27ರಂದು ರಾಜಭವನಕ್ಕೆ ಭೇಟಿ ನೀಡಿದ ನಂತರ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಗವರ್ನರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.