ಬೆಂಗಳೂರು: ದೇಶದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಇದೇ ಜುಲೈ 12 ರಂದು ಮುಂಬೈನಲ್ಲಿ ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ಅವರ ಅದ್ಧೂರಿ ವಿವಾಹ ಕಾರ್ಯಕ್ರಮಕ್ಕೆ ದೇಶದ ಗಣ್ಯಾತಿಗಣ್ಯರಿಗೆ ಆಮಂತ್ರಣ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೂ ಮದುವೆಯ ಆಮಂತ್ರಣ ಪತ್ರಿಕೆ ನೀಡಲಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಶ್ರೀಮಂತ ಮದುವೆ ಕಾಗದ ಎನ್ನುವುದಕ್ಕಿಂತಲೂ ಹೆಚ್ಚಾಗಿ ಚಿನ್ನ, ಬೆಳ್ಳಿ ಲೇಪಿತ ದೇವರ ಪುಟ್ಟ ಗುಡಿ ಸಮೇತ ಆಮಂತ್ರಣ ಪತ್ರಿಕೆಯನ್ನು ನಿರ್ಮಿಸಲಾಗಿದೆ. ಒಳಗಡೆ ವಿವಿಧ ಹಿಂದೂ ದೇವತೆಗಳ ಚಿತ್ರಗಳು ಹಾಗೂ ವರ್ಣರಂಜಿತವಾಗಿ ಅಲಂಕರಿಸಲ್ಪಟ್ಟ ಪೆಟ್ಟಿಗೆಯಲ್ಲಿ ಸಿದ್ದರಾಮಯ್ಯ ಅವರ ಹೆಸರನ್ನೂ ಅಚ್ಚು ಹಾಕಲಾಗಿದೆ.
ಪೆಟ್ಟಿಗೆಯನ್ನು ತೆರೆಯುತ್ತಲೇ ಹಿನ್ನಲೆಯಲ್ಲಿ ಹಿಂದಿ ಮಂತ್ರಗಳು ಕೇಳಿಸುತ್ತದೆ. ಪೆಟ್ಟಿಗೆಯಲ್ಲಿ ಕೆಲವು ಚಿನ್ನ, ಬೆಳ್ಳಿಯ ವಿಗ್ರಹಗಳೂ ಇವೆ. ಇನ್ನೊಂದು ಪುರಾತನ ದೇವಾಲಯದ ಮುಖ್ಯ ದ್ವಾರವನ್ನು ಹೋಲುವ ಬೆಳ್ಳಿಯ ಕಾರ್ಡ್ ಮಾಡಲಾಗಿದ್ದು,ಅದರಲ್ಲಿ ಗಣೇಶ, ವಿಷ್ಣು, ಲಕ್ಷ್ಮಿ, ರಾಧಾ-ಕೃಷ್ಣ ಮತ್ತು ದುರ್ಗಾ ದೇವತೆ ಸೇರಿದಂತೆ ಹಲವಾರು ಹಿಂದೂ ದೇವತೆಗಳ ಚಿತ್ರಗಳೂ ಒಳಗೊಂಡಿವೆ. ಮದುವೆಯ ಆಮಂತ್ರಣದಲ್ಲಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನೂ ಒಳಗೊಂಡ ಕರಪತ್ರಗಳನ್ನು ಇರಿಸಲಾಗಿದೆ.
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಶುಭ ವಿವಾಹದ ಪ್ರಮುಖ ಸಮಾರಂಭಗಳು ಜುಲೈ 12 ಶುಕ್ರವಾರ ಪ್ರಾರಂಭವಾಗಲಿದೆ. ಜುಲೈ 13 ರಂದು ಶುಭ ಆಶೀರ್ವಾದ ಅಥವಾ ದೈವಿಕ ಆಶೀರ್ವಾದ ಸಮಾರಂಭ ನಡೆಯಲಿದೆ. ಜುಲೈ 14 ರಂದು ಮಂಗಲ್ ಉತ್ಸವ ಅಥವಾ ಮದುವೆಯ ಆರತಕ್ಷತೆಯೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿದೆ.