ಚೆನ್ನೈ: ವೈದ್ಯಕೀಯ ಕೋರ್ಸ್ಗಳಿಗಿರುವ ಪ್ರವೇಶ ಪರೀಕ್ಷೆ “ನೀಟ್”ನಿಂದ ತಮಿಳುನಾಡಿಗೆ ವಿನಾಯಿತಿ ನೀಡಬೇಕೆಂದು “ತಮಿಳಿಗ ವೆಟ್ರಿ ಕಳಗಂ” ಪಕ್ಷದ ನಾಯಕ, ನಟ ವಿಜಯ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
ದೇಶದ ಜನ ನೀಟ್ ಪರೀಕ್ಷೆಯ ಬಗ್ಗೆ ನಂಬಿಕೆ ಕಳೆದುಕೊಂಡಿರುವ ಈ ಸಂದರ್ಭದಲ್ಲಿ ನಾನು ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಲಾದ ನೀಟ್ ವಿರುದ್ಧದ ನಿರ್ಣಯಗಳನ್ನು ಸ್ವಾಗತಿಸುತ್ತ, ತಮಿಳುನಾಡಿನ ಜನರ ಭಾವನೆಗಳನ್ನು ಗೌರವಿಸುವಂತೆ ಕೇಂದ್ರವನ್ನು ಆಗ್ರಹಿಸುತ್ತಿದ್ದೇನೆ ಎಂದು ವಿಜಯ್ ಹೇಳಿದ್ದಾರೆ. ಸಂವಿಧಾನದಡಿ ಕೆಲವೊಂದು ಕಾನೂನುಗಳನ್ನು ತಿದ್ದುಪಡಿ ಮಾಡಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಕೆಲಸ ಆಗಬೇಕಿದೆ ಎಂದರು.
ತಮಿಳುನಾಡು ವಿಧಾನಸಭೆಯು ನೀಟ್ ಪರೀಕ್ಷೆಯಿಂದ ಅಲ್ಲಿನ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡುವ ಸಂಬಂಧ ಇತ್ತೀಚೆಗೆ ಮಸೂದೆ ಅಂಗೀಕರಿಸಿತ್ತು. ಆದರೆ ರಾಜ್ಯಪಾಲ ಆರ್.ಎನ್ ರವಿ ಅಂಕಿತ ಹಾಕಲು ವಿಳಂಬ ಮಾಡುತ್ತಿದ್ದು, ಬಳಿಕ ಮುಖ್ಯಮಂತ್ರಿ ಸ್ಟಾಲಿನ್ ಪ್ರಧಾನಿಯ ಮುಂದೆ ಈ ಬೇಡಿಕೆ ಮಂಡಿಸಿದ್ದರು. ಈಗ ನಟ ವಿಜಯ್ ಕೂಡ ಮಸೂದೆಯ ಪರ ಧ್ವನಿಗೂಡಿಸಿದ್ದಾರೆ.