ಗೋಕಾಕ್: ವೈದ್ಯರ (Doctor) ನಿರ್ಲಕ್ಷದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿದ ಪೋಷಕರು ಆಸ್ಪತ್ರೆಯ ಪರಿಕರಗಳನ್ನು ಒಡೆದು ಹಾಕಿದ ಘಟನೆ ಗೋಕಾಕ್ನ (Gokak) ಬ್ಯಾಳಿ ಕಾಟಾ ಬಳಿಯಿರುವ ಕಡಾಡಿ ಆಸ್ಪತ್ರೆಯಲ್ಲಿ ನಡೆದಿದೆ.
ಡಾ. ಮಹಾಂತೇಶ್ ಕಡಾಡಿ ಎಂಬುವವರಿಗೆ ಸೇರಿದ ಖಾಸಗಿ ಆಸ್ಪತ್ರೆ ಇದಾಗಿದ್ದು, ಶಿವಾನಂದ ನಿಂಗಪ್ಪ ಬಡಬಡಿ ಎಂಬುವವರ 7 ತಿಂಗಳ ಮಗುವನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನಿನ್ನೆ ತಡರಾತ್ರಿ ಮಗುವಿನ ಪರಿಸ್ಥಿತಿ ಗಂಭೀರವಾಗಿತ್ತು.
ಈ ಹಿನ್ನೆಲೆಯಲ್ಲಿ ಬೆಳಗ್ಗೆ ಆ್ಯಂಬುಲೆನ್ಸ್ ತರಿಸಿ ಮಗುವನ್ನು ಬೇರೆ ಆಸ್ಪತ್ರೆಗೆ ದಾಖಲಿಸಿ ಎಂದು ವೈದ್ಯರು ಹೇಳಿದ್ದರು. ಅದರಂತೆ ವೈದ್ಯರ ಸೂಚನೆಯ ಮೇರೆಗೆ ಮಗುವಿನ ಪೋಷಕರು ಆ್ಯಂಬುಲೆನ್ಸ್ ಸಹ ತರಿಸಿದ್ದರು. ಆದರೆ, ಆ್ಯಂಬುಲೆನ್ಸ್ ಬರುವಷ್ಟರಲ್ಲಿ ಮಗು ಮೃತಪಟ್ಟಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆ ವಸ್ತುಗಳನ್ನು ಹಾಳು ಮಾಡಿದ್ದಾರೆ. ವೈದ್ಯ ಕಡಾಡಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಗೋಕಾಕ್ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.