ಸೂರತ್: ಬೇಸಿಗೆ ರಜೆ ಮತ್ತು ಮದುವೆಯ ಸೀಸನ್ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರಕ್ಕೆ ತೆರಳುವ ಪ್ರಯಾಣಿಕರ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಸೂರತ್ನ (Surat) ಉಧ್ನಾ ರೈಲ್ವೆ ನಿಲ್ದಾಣದಲ್ಲಿ (Railway Station) ಭಾನುವಾರ ತುಳಿತದಂತಹ (Stampede) ಪರಿಸ್ಥಿತಿ ನಿರ್ಮಾಣವಾಗಿತ್ತು.
ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಈ ಗೊಂದಲದ ನಡುವೆ ಹಲವು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
સુરતના ઉધના રેલવે સ્ટેશન પર ભાગદોડ, 24 કલાકની લાઈનથી કંટાળી લોકો 'પાગલ' બન્યાં#Surat #Udhna #RailwayStation #Crowd #PublicChaos #PassengerIssue #रेलवे #TravelAlert pic.twitter.com/eW9JlT9uhj
— VTV Gujarati News and Beyond (@VtvGujarati) April 19, 2026
ಐದು ಕಿಲೋಮೀಟರ್ ಉದ್ದದ ಸಾಲು!
ಬೇಸಿಗೆಯ ರಜೆ ಆರಂಭವಾಗಿರುವುದರಿಂದ ತಮ್ಮೂರಿಗೆ ತೆರಳಲು ಸಾವಿರಾರು ಜನರು ಶನಿವಾರ ಸಂಜೆಯಿಂದಲೇ ನಿಲ್ದಾಣಕ್ಕೆ ಬರಲಾರಂಭಿಸಿದ್ದರು. ಭಾನುವಾರ ಬೆಳಿಗ್ಗೆಯ ವೇಳೆಗೆ ಜನದಟ್ಟಣೆ ಮಿತಿ ಮೀರಿದ್ದು, ರೈಲ್ವೆ ನಿಲ್ದಾಣದ ಹೊರಗೆ ಸುಮಾರು ಐದು ಕಿಲೋಮೀಟರ್ವರೆಗೂ ಸರತಿ ಸಾಲು ಕಂಡುಬಂದಿತ್ತು. ಕುಟುಂಬದವರು ಮತ್ತು ಸಣ್ಣ ಮಕ್ಕಳೊಂದಿಗೆ ಬಂದಿದ್ದ ಪ್ರಯಾಣಿಕರು ಬಿಸಿಲಿನಲ್ಲಿ 10 ರಿಂದ 12 ಗಂಟೆಗಳ ಕಾಲ ಕಾಯಬೇಕಾಯಿತು. ವಿಪರೀತ ಶಾಖ ಮತ್ತು ಆಯಾಸದಿಂದಾಗಿ ಒಬ್ಬ ಪ್ರಯಾಣಿಕ ಪ್ರಜ್ಞೆ ತಪ್ಪಿ ಬಿದ್ದ ಘಟನೆಯೂ ನಡೆದಿದೆ.
ಉಧ್ನಾ ನಿಲ್ದಾಣಕ್ಕೆ ಬಂದ ರೈಲುಗಳ ಅನ್ರಿಸರ್ವ್ಡ್ ಕೋಚ್ಗಳಲ್ಲಿ ಜನರನ್ನು ತುಂಬಲಾಗಿತ್ತು. ಕೇವಲ 100 ಜನರು ಕುಳಿತುಕೊಳ್ಳಬಹುದಾದ ಬೋಗಿಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ಕಿಕ್ಕಿರಿದು ತುಂಬಿದ್ದರು. ಕುಳಿತುಕೊಳ್ಳಲು ಜಾಗವಿಲ್ಲದೆ ಜನರು ಶೌಚಾಲಯಗಳ ಹತ್ತಿರ, ನೆಲದ ಮೇಲೆ ಮತ್ತು ಬಾಗಿಲಿನ ಬಳಿ ಕುಳಿತು ಪ್ರಯಾಣಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಪ್ರಯಾಣಿಕರ ನೂಕುನುಗ್ಗಲು ಹೆಚ್ಚಾದಾಗ ರೈಲು ಹತ್ತಲು ಜನರು ಒಬ್ಬರ ಮೇಲೊಬ್ಬರು ಮುಗಿಬಿದ್ದಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಪೊಲೀಸರು ಬಲಪ್ರಯೋಗ ಮಾಡಬೇಕಾಯಿತು.
ಭಾನುವಾರ ಬೆಳಿಗ್ಗೆ 1:30 ರಿಂದ 9 ಗಂಟೆಯ ನಡುವೆ ನಾಲ್ಕು ವಿಶೇಷ ರೈಲುಗಳನ್ನು ಕಾರ್ಯಾಚರಣೆಗೊಳಿಸಿ ಸಾವಿರಾರು ಪ್ರಯಾಣಿಕರನ್ನು ರವಾನಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಜನದಟ್ಟಣೆ ಕಡಿಮೆ ಮಾಡಲು ಹೆಚ್ಚಿನ ರೈಲುಗಳ ವ್ಯವಸ್ಥೆ ಮಾಡಲಾಗುತ್ತಿದ್ದರೂ, ಏಕಕಾಲದಲ್ಲಿ ಬಂದ ಜನಸಮೂಹವನ್ನು ನಿರ್ವಹಿಸುವುದು ದೊಡ್ಡ ಸವಾಲಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಸದ್ಯ ನಿಲ್ದಾಣದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪ್ರಯಾಣಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದೆ.