ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ರದ್ದಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಗೆ ಪ್ರಿಯಾಂಕಾ ಗಾಂಧಿ ಸವಾಲು ಹಾಕಿದ್ದಾರೆ. ನೀವು ಏನು ಮಾಡಿದರೂ ನಿಮ್ಮಂತಹ ಹೇಡಿ, ಸರ್ವಾಧಿಕಾರಿಯ ಮುಂದೆ ನಾವು ತಲೆ ಬಾಗುವುದಿಲ್ಲ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಪ್ರಿಯಾಂಕಾ, “ಮೋದಿಯವರೇ, ನಿಮ್ಮ ಹೊಗಳುಭಟರು ಹುತಾತ್ಮ ಪ್ರಧಾನಿಯ ಮಗನನ್ನು (ರಾಹುಲ್) ದೇಶದ್ರೋಹಿ ಮೀರ್ ಜಾಫರ್ ಎಂದು ಕರೆದರು. ನಿಮ್ಮ ಮುಖ್ಯಮಂತ್ರಿಯೊಬ್ಬರು ರಾಹುಲ್ ಗಾಂಧಿಯವರ ತಂದೆ ಯಾರು ಎಂಬ ಪ್ರಶ್ನೆಯನ್ನು ಎತ್ತಿದರು.. ಕಾಶ್ಮೀರಿ ಪಂಡಿತರ ಸಂಪ್ರದಾಯದ ಪ್ರಕಾರ, ತನ್ನ ತಂದೆಯ ಮರಣದ ನಂತರ ಮಗನು ಪೇಟವನ್ನು ಧರಿಸುತ್ತಾನೆ, ತನ್ನ ಕುಟುಂಬದ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಾನೆ. ನೀವು ನಮ್ಮ ಇಡೀ ಕುಟುಂಬ ಮತ್ತು ಕಾಶ್ಮೀರಿ ಪಂಡಿತ ಸಮುದಾಯವನ್ನು ಅವಮಾನಿಸಿದ್ದೀರಿ. ಆದರೆ, ಅದಕ್ಕಾಗಿ ಯಾವ ನ್ಯಾಯಾಧೀಶರೂ ನಿಮಗೆ ಎರಡು ವರ್ಷಗಳ ಶಿಕ್ಷೆ ನೀಡಿಲ್ಲ. ನಿಮ್ಮನ್ನು ಸಂಸತ್ತಿನಿಂದ ಅನರ್ಹಗೊಳಿಸಿಲ್ಲ” ಎಂದು ಪ್ರಿಯಾಂಕ ಟ್ವೀಟ್ ಮಾಡಿದ್ದಾರೆ.
ನೀವು ನಮ್ಮ ಇಡೀ ಕುಟುಂಬ ಮತ್ತು ಕಾಶ್ಮೀರಿ ಪಂಡಿತ ಸಮುದಾಯವನ್ನು ಅವಮಾನಿಸಿದ್ದೀರಿ. ಆದರೆ, ಅದಕ್ಕಾಗಿ ಯಾವ ನ್ಯಾಯಾಧೀಶರೂ ನಿಮಗೆ ಎರಡು ವರ್ಷಗಳ ಶಿಕ್ಷೆ ನೀಡಿಲ್ಲ. ನಿಮ್ಮನ್ನು ಸಂಸತ್ತಿನಿಂದ ಅನರ್ಹಗೊಳಿಸಿಲ್ಲ
-ಪ್ರಿಯಾಂಕ ಗಾಂಧಿ ವಾದ್ರಾ
ನಿಜವಾದ ದೇಶಪ್ರೇಮಿಯಂತೆ ರಾಹುಲ್, ಅದಾನಿಯ ಲೂಟಿಯನ್ನು ಪ್ರಶ್ನಿಸಿದ್ದಾರೆ. ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ. ನಿಮ್ಮ ಗೆಳೆಯ ಗೌತಮ್ ಅದಾನಿ ದೇಶದ ಸಂಸತ್ತಿಗಿಂತ ದೊಡ್ಡವರೇ? ಅದಾನಿ ಲೂಟಿಯನ್ನು ಪ್ರಶ್ನಿಸಿದ ತಕ್ಷಣ ನೀವು ಬೆಚ್ಚಿದ್ದೀರ? ಎಂದು ಪ್ರಿಯಾಂಕ ಗಾಂಧಿ ಪ್ರಶ್ನಿಸಿದ್ದಾರೆ.
ನಮ್ಮ ಕುಟುಂಬವನ್ನು ಪರಿವಾರವಾದಿ ಎಂದು ನೀವು ಕರೆಯುತ್ತೀರಿ. ಭಾರತದ ಪ್ರಜಾಪ್ರಭುತ್ವದ ಬೇರನ್ನು ಗಟ್ಟಿಗೊಳಿಸಲು ಈ ಕುಟುಂಬವು ತನ್ನ ರಕ್ತವನ್ನು ನೀರಿನಂತೆ ಹರಿಸಿದೆ. ಅದನ್ನು ನಾಶಮಾಡಲು ನೀವು ಪ್ರಯತ್ನಿಸುತ್ತಿದ್ದೀರಿ. ಈ ಕುಟುಂಬವು ಭಾರತದ ಜನರ ಧ್ವನಿಯನ್ನು ಎತ್ತಿತು, ತಲೆಮಾರುಗಳಿಂದ ಸತ್ಯಕ್ಕಾಗಿ ಹೋರಾಡಿದೆ. ನಮ್ಮ ರಕ್ತನಾಳಗಳಲ್ಲಿ ಹರಿಯುವ ರಕ್ತಕ್ಕೆ ಒಂದು ವಿಶೇಷತೆ ಇದೆ. ಅದು ನಿಮ್ಮಂತಹ ಹೇಡಿ, ಅಧಿಕಾರ ದಾಹಿ ಸರ್ವಾಧಿಕಾರಿಯ ಎದುರು ಎಂದಿಗೂ ತಲೆಬಾಗುವುದಿಲ್ಲ. ನೀವು ಏನು ಬೇಕಾದರೂ ಮಾಡಿ ಎಂದು ಪ್ರಿಯಾಂಕ ಗಾಂಧಿ ಸವಾಲು ಹಾಕಿದ್ದಾರೆ.