ಬೆಂಗಳೂರು: ಸರಕು ಸಾಗಣೆ ಲಾರಿ ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಬೈಕ್ ಸಿಲುಕಿ, ಬೈಕ್ನಲ್ಲಿದ್ದ ಮಹಿಳೆ ಅನುಷಾ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಭಾನುವಾರ ನಗರದ ನಾಯಂಡನಹಳ್ಳಿ ವೃತ್ತದಲ್ಲಿ ನಡೆದಿದೆ. ಬೈಕ್ನಲ್ಲಿದ್ದ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಯಂಡನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಮೇಲ್ಸೇತುವೆಯಿಂದ ಕೆಳಗಿಳಿಯುವ ವಾಹನಗಳು ಹಾಗೂ ರಸ್ತೆಯಲ್ಲಿ ಸಂಚರಿಸುವ ವಾಹನಗಳ ನಡುವೆ ಘರ್ಷಣೆಯಿಂದಾಗಿ ಇಲ್ಲಿ ಪ್ರತಿನಿತ್ಯ ಅಪಘಾತಗಳು ಸಾಮಾನ್ಯ. ಬಿಬಿಎಂಪಿಯ ಅವೈಜ್ಞಾನಿಕ ಕಾಮಗಾರಿ ಸಹ ಅಪಘಾಥ ಹೆಚ್ಚಳಕ್ಕೆ ಕಾರಣ ಎಂಬ ಕೂಗು ಕೇಳಿಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಬ್ಯಾಟರಾಯನಪುರ ಸಂಚಾರಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ಕಾರಣದಿಂದಾಗಿ ಮೈಸೂರು ರಸ್ತೆಯಲ್ಲಿ ಒಂದು ತಾಸಿಗೂ ಅಧಿಕಕಾಲ ವಾಹನ ದಟ್ಟಣೆ ಉಂಟಾಗಿತ್ತು.