Sunday, January 25, 2026
Homeಟಾಪ್ ನ್ಯೂಸ್WEATHER: ರಾಜ್ಯದಲ್ಲಿ ಮುಂದಿನ 24 ಗಂಟೆ ತೀವ್ರಗೊಳ್ಳಲಿದೆ ಶೀತಗಾಳಿ, ಹವಾಮಾನ ಇಲಾಖೆ ಎಚ್ಚರಿಕೆ!

WEATHER: ರಾಜ್ಯದಲ್ಲಿ ಮುಂದಿನ 24 ಗಂಟೆ ತೀವ್ರಗೊಳ್ಳಲಿದೆ ಶೀತಗಾಳಿ, ಹವಾಮಾನ ಇಲಾಖೆ ಎಚ್ಚರಿಕೆ!

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಉತ್ತರ ಒಳನಾಡು ಭಾಗದಲ್ಲಿ ಮುಂದಿನ 24 ಗಂಟೆಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ (Weather) ಇಲಾಖೆ (ಐಎಂಡಿ) ಶನಿವಾರ ಎಚ್ಚರಿಕೆ ನೀಡಿದೆ.

ರಾಜ್ಯದ ಒಳನಾಡು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸಾಧಾರಣಕ್ಕಿಂತ 3 ರಿಂದ 6 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿಯುವ ಸಾಧ್ಯತೆ ಇದ್ದು, ಹಲವೆಡೆ ಮಂಜು ಮುಸುಕಿದ ವಾತಾವರಣ ಇರಲಿದೆ. ವಿಜಯಪುರದಲ್ಲಿ ಕಳೆದ 24 ಗಂಟೆಗಳಲ್ಲಿ ತೀವ್ರ ಚಳಿ ಗಾಳಿ ಬೀಸಿರುವುದು ಗಮನಕ್ಕೆ ಬಂದಿದೆ ಎಂದು ಐಎಂಡಿ ತಿಳಿಸಿದೆ.

ಈ ನಡುವೆ, ಬಂಗಾಳಕೊಲ್ಲಿಯ ನೈರುತ್ಯ ಭಾಗ ಹಾಗೂ ಶ್ರೀಲಂಕಾದ ಈಶಾನ್ಯ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಉತ್ತರ–ವಾಯವ್ಯ ದಿಕ್ಕಿನಲ್ಲಿ ಮಾರುತಗಳು ಚಲಿಸುತ್ತಿವೆ. ಇದರ ಪರಿಣಾಮವಾಗಿ ಕರ್ನಾಟಕದ ಹವಾಮಾನ ಮತ್ತು ಮಳೆಯ ಮಾದರಿಯಲ್ಲಿ ಸ್ವಲ್ಪ ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಭಾರತ ಹವಾಮಾನ ಇಲಾಖೆಯ ಪ್ರಕಾರ, ಇದು ಮುಂದಿನ 6 ಗಂಟೆಗಳಲ್ಲಿ ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದ್ದು, ನಂತರ ದುರ್ಬಲಗೊಂಡು ಪಶ್ಚಿಮ–ವಾಯುವ್ಯ ದಿಕ್ಕಿನಲ್ಲಿ ಸಾಗಲಿದೆ. ಹೀಗಾಗಿ ತ್ರಿಕೋನಮಲಿ ಮತ್ತು ಜಾಫ್ನಾ ನಡುವೆ ಉತ್ತರ ಶ್ರೀಲಂಕಾ ಕರಾವಳಿಯನ್ನು ದಾಟುವ ಸಾಧ್ಯತೆ ಇದೆ.

ಜನವರಿ 10ರಂದು ನೈಋತ್ಯ ಬಂಗಾಳಕೊಲ್ಲಿ ಹಾಗೂ ಹಿಂದೂ ಮಹಾಸಾಗರದ ಪಕ್ಕದ ಪ್ರದೇಶಗಳಲ್ಲಿ ಸಮುದ್ರದ ಸ್ಥಿತಿ ತುಂಬಾ ಪ್ರಕ್ಷುಬ್ಧವಾಗುವ ಸಾಧ್ಯತೆಯಿದ್ದು, ಬಳಿಕ ಕ್ರಮೇಣ ಸುಧಾರಿಸುವ ನಿರೀಕ್ಷೆಯಿದೆ.

ಮುಂಬರುವ ದಿನಗಳಲ್ಲಿ ರಾಜ್ಯದ ಹೆಚ್ಚಿನ ಪ್ರದೇಶಗಳಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ. ಆದರೆ ತುಮಕೂರು, ಚಿಕ್ಕಮಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಅಲ್ಪ ಮಳೆಯಾಗುವ ಸಾಧ್ಯತೆ ಇದೆ.

ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಶುಷ್ಕ ಹವಾಮಾನವೇ ಮುಂದುವರಿಯಲಿದೆ ಎಂಬ ಮುನ್ಸೂಚನೆ ನೀಡಲಾಗಿದೆ.

 ವಿಪರೀತ ಚಳಿಗೆ ಬೆಚ್ಚಗೆ ಮಲಗಿದ್ದ ಹಸುಗೂಸು ಸಾ*ವು

ದೇಶದಲ್ಲಿ ವಿಪರೀತ ಚಳಿಗೆ (Winter) ಜನರು ತತ್ತರಿಸಿಹೋಗಿದ್ದಾರೆ. ಮೈ ಕೊರೆಯುವ ಚಳಿಗೆ (Cold) ಕಂಬಳಿ ಹೊದ್ದಿದ್ದ ನವಜಾತ ಶಿಶು ಸಾವನ್ನಪ್ಪಿದೆ. ಉತ್ತರ ಪ್ರದೇಶದ ( Uttar Pradesh) ವಾರಣಾಸಿ (Varanasi) ಜಿಲ್ಲೆಯ ಮಿರ್ಜಾಮುರಾದ್ ಪ್ರದೇಶದಲ್ಲಿ ಘಟನೆ ನಡೆದಿದೆ.

ತೀವ್ರ ಥಂಡಿಯಿದ್ದ ಕಾರಣ ಮಗುವಿಗೆ ಚಳಿಯಾಗುತ್ತದೆ ಎಂದು ಗುರುವಾರ ರಾತ್ರಿ ಮಲಗುವಾಗ ದಪ್ಪ ಹೊದಿಕೆ ಮಗುವಿಗೆ ಹಾಕಿದ್ದೆ ಮಗುವಿನ ಸಾವಿಗೆ ಕಾರಣವಾಗಿದೆ.

ಸುಮಾರು ಒಂದು ತಿಂಗಳ ಮಗು ದಪ್ಪ ಹೊದಿಕೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದೆ. ಬೆಳಿಗ್ಗೆ ಎದ್ದು ನೋಡಿದಾಗ ಮಗು ಉಸಿರು ನಿಂತುಹೋಗಿತ್ತು. ಬೆಚ್ಚಗೆ ಮಲಗಿದ್ದ ಮಗುವಿಗೆ ದಪ್ಪ ಹೊದಿಕೆ ಹೊದಿಸಿ ಮಲಗಿಸಲಾಗಿತ್ತು. ಉಸಿರುಗಟ್ಟಿ ಮಗು ಪ್ರಾಣಬಿಟ್ಟಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಥಂಡಿ ಶೀತದ ವಾತಾವರಣ – ತುಂತುರು ಮಳೆ ಸಂಭವ!

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!