ನಟ ಸುದೀಪ್ ಅವರು ಬಿಜೆಪಿ ಪರ ಪ್ರಚಾರಕ್ಕೆ ಇಳಿಯುತ್ತಿರುವುದನ್ನು ಅವರ ಅಭಿಮಾನಿಗಳೇ ವಿರೋಧಿಸುತ್ತಿದ್ದಾರೆ. ಟ್ವಿಟರಿನಲ್ಲಿ ಅಭಿಯಾನ ಮಾಡುತ್ತಿರುವ ಕಿಚ್ಚನ ಅಭಿಮಾನಿಗಳು ಸುದೀಪ್ ರಾಜಕಾರಣಕ್ಕೆ ಬರಬಾರದು ಎಂದು ಆಗ್ರಹಿಸುತ್ತಿದ್ದಾರೆ.
ಸಿಎಂ ಬೊಮ್ಮಾಯಿ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದ್ದು, ಸುದೀಪ್ ಜೊತೆಗಿನ ಸ್ನೇಹವನ್ನು ಮತಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಯೊಬ್ಬರು ಕಿಡಿ ಕಾರಿದ್ದಾರೆ.
ಎರಡು ನಾಲಿಗೆ ಇರೋ ರಾಜಕಾರಣಿಗಳನ್ನ ನಂಬಿ ರಾಜಕೀಯಕ್ಕೂ ರಾಜಕೀಯ ಪಕ್ಷದ ಪ್ರಚಾರಕ್ಕೋ, ಹೋಗೋದಕ್ಕಿಂತ, ಸದಾ ನಿಮ್ಮ ಶ್ರೇಯೋಭಿಲಾಷಿಗಳಾಗಿ ಇರೋ ಅಭಿಮಾನಿಗಳಿಗಾಗಿ ಕೆಲಸ ಮಾಡಿ ಎಂದು ಸುದೀಪ್ ಅಭಿಮಾನಿಗಳು ಮನವಿ ಮಾಡಿದ್ದಾರೆ,
“ನೀವು ವಿಲನ್ ಪಾತ್ರ ಮಾಡಿದ್ದೀರಿ, ನಾವು ಏನೂ ಕೇಳಲಿಲ್ಲ. ನೀವು ಅತಿಥಿ ಪಾತ್ರ ಮಾಡಿ, ನಿಮ್ಮ ವೃತ್ತಿ ಬದುಕಿನ ಕೆಲವು ಘಟ್ಟಗಳನ್ನು ಹಾಳು ಮಾಡಿಕೊಂಡ್ರಿ, ಆದ್ರೂ ನಾವು ಕೇಳಲಿಲ್ಲ. ನೀವು ನಂದಕಿಶೋರ್ ಜೊತೆ ಮತ್ತೆ ಸಿನಿಮಾ ಮಾಡ್ತೀರಾ ಅಂದ್ರೂ ನಾವು ನಿಮ್ಮನ್ನು ಕೇಳಲ್ಲ, ಇನ್ನಷ್ಟು ಅತಿಥಿ ಪಾತ್ರ ಮಾಡಿದ್ರೂ ನಮಗೆ ಅಭ್ಯಂತರವಿಲ್ಲ. ಆದರೆ ಈ ರಾಜಕೀಯಕ್ಕೆ ಮಾತ್ರ ದಯವಿಟ್ಟು ಎಂಟ್ರಿ ಆಗಬೇಡಿ” ಎಂದು ಮತ್ತೊಬ್ಬ ಅಭಿಮಾನಿ ಮನವಿ ಮಾಡಿದ್ದಾರೆ.
ಬಿಜೆಪಿ ಸರಿಯಾಗಿ ಕೆಲಸ ಮಾಡಿದ್ದಿದ್ರೆ ನಮ್ಮ ಬಾಸ್ ನ ಈ ರಾಜಕಾರಣಕ್ಕೆ ಎಳೆದು ತರುವ ಅವಶ್ಯಕತೆ ಇರಲಿಲ್ಲ ಎಂದು ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದಾರೆ.