ಬೆಂಗಳೂರು: ‘ಉಚಿತ ಕೊಡುಗೆಗಳ ಹಿಂದಿನ ರೂವಾರಿಗಳು ದಿಲ್ಲಿಯಲ್ಲಿದ್ದಾರೆ. ಸಂಪನ್ಮೂಲಗಳ ಅಭಿವೃದ್ಧಿ ಬಗ್ಗೆ ಅವರಿಗೆ ಯಾವುದೇ ಜವಾಬ್ದಾರಿಗಳು ಇಲ್ಲದೇ ಇದ್ದುದರಿಂದ ಅವರಿಗೆ ಹೀಗೆ ಮಾಡುತ್ತಾರೆ. ಉಚಿತ ಕೊಡುಗೆಗಳನ್ನು ಕೊಟ್ಟು ದೇಶ ನಡೆಸಲು ಸಾಧ್ಯವಿಲ್ಲ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಜೈಶಂಕರ್ ಹೇಳಿದ್ದಾರೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಸಂಸದ ತೇಜಸ್ವಿ ಸೂರ್ಯ ಆಯೋಜಿಸಿದ್ದ ಮೀಟ್ ಆ್ಯಂಡ್ ಗ್ರೀಟ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೈಶಂಕರ್ ಅವರ ಹೇಳಿಕೆ ಮಹತ್ವ ಪಡೆದಿದೆ. ಕಾಂಗ್ರೆಸ್ ಈಗಾಗಲೇ ಅಧಿಕಾರಕ್ಕೆ ಬಂದರೆ ಹಲವು ಉಚಿತ ಕೊಡುಗೆಗಳನ್ನು ನೀಡುವುದಾಗಿ ಘೋಷಿಸಿದೆ.
ಇದೇ ಸಂದರ್ಭ ರಾಹುಲ್ ಗಾಂಧಿ ಅನರ್ಹತೆ ವಿಚಾರಕ್ಕೆ ಸಂಬಂಧಿಸಿ ಜರ್ಮನಿ ಮತ್ತು ಅಮೆರಿಕ ನೀಡಿದ್ದ ಪ್ರತಿಕ್ರಿಯೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪಾಶ್ಚಿಮಾತ್ಯ ರಾಷ್ಟ್ರಗಳು ತಮಗೆ ಇತರ ದೇಶಗಳ ಆಂತರಿಕ ವಿಚಾರಗಳ ಬಗ್ಗೆ ಕಾಮೆಂಟ್ ಮಾಡುವ ಅಧಿಕಾರವಿದೆ ಎಂದು ಭಾವಿಸುತ್ತಿವೆ ಎಂದರು.
“ಬೇರೆ ದೇಶಗಳ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡುವ ಅಭ್ಯಾಸ ಪಾಶ್ಚಿಮಾತ್ಯ ದೇಶಗಳಿಗೆ ಹಿಂದಿನಿಂದಲೂ ಇವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಬೇರೆ ರಾಷ್ಟ್ರಗಳೂ ಕೂಡ ಪಾಶ್ಚಿಮಾತ್ಯ ದೇಶಗಳ ಕುರಿತಾಗಿ ಕಾಮೆಂಟ್ ಮಾಡುತ್ತವೆ. ಅದು ಅವರಿಗೆ ಇಷ್ಟವಾಗುವುದಿಲ್ಲ’’ ಎಂದರು.