ಭುವನೇಶ್ವರ: ಪಾಕಿಸ್ತಾನದ ವಿರುದ್ಧ ಇಡೀ ದೇಶವೇ ಕೆರಳಿದೆ. ಶತ್ರುರಾಷ್ಟ್ರದ ವಿರುದ್ಧ ಸೇಡು ತೀರಿಸಿಕೊಳ್ಳಿ ಎಂದು ಪ್ರತಿಯೊಬ್ಬರೂ ಹೇಳುತ್ತಿದ್ದಾರೆ. ‘ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಹೋರಾಡಲು ಭಾರತೀಯ ಸೇನೆಗೆ ಸೇರಲು ಬಯಸುತ್ತೇನೆ’ ಎಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತಂದೆಯನ್ನು ಕಳೆದುಕೊಂಡ ಕೇವಲ 9 ವರ್ಷದ ಬಾಲಕ ತನುಜ್ ಕುಮಾರ್ ಸತ್ಪತಿ ಭಾವೋದ್ವೇಗದ ನುಡಿ.
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಬಾಲಕ ತನುಜ್ ಕುಮಾರ್ ಸತ್ಪತಿ ತಂದೆ ಪ್ರಶಾಂತ್ ಸತ್ಪತಿ ಸೇರಿದಂತೆ 26 ನಾಗರಿಕರು ಮೃತಪಟ್ಟಿದ್ದರು. ಒಡಿಶಾದ ಬಾಲಾಸೋರ್ ಮೂಲದ ತನುಜ್ ಕುಮಾರ್ ಸತ್ಪತಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಅವಕಾಶ ಸಿಕ್ಕರೆ, ಮುಂದಿನ ದಿನಗಳಲ್ಲಿ ಯಾವುದೇ ಮಗುವಿಗೂ ನನ್ನ ಸ್ಥಿತಿ ಎದುರಾಗದಂತೆ ನೋಡಿಕೊಳ್ಳುವಂತೆ ಮನವಿ ಮಾಡುತ್ತೇನೆ. ನನಗೆ ಈಗ ತಂದೆಯ ಬೆಲೆ ಗೊತ್ತಾಗಿದೆ. ಭಾರತದ ನೆಲದಿಂದ ಭಯೋತ್ಪಾದನೆಗೆ ಅವಕಾಶ ಇಲ್ಲದಂತೆ, ಪಹಲ್ಗಾಮ್ ಸೇರಿದಂತೆ ಇಡೀ ದೇಶಾದ್ಯಂತ ಭದ್ರತೆ ಕಲ್ಪಿಸಬೇಕು ಎಂದು ಕೇಳುತ್ತೇನೆ ಎಂದಿದ್ದಾನೆ.
ನಾನು ತಂದೆಯ ಸಾವಿನ ಪ್ರತೀಕಾರ ತೀರಿಸಿಕೊಳ್ಳಲು ಸೇನೆಗೆ ಸೇರಲು ನಿರ್ಧರಿಸಿದ್ದೇನೆ. ಸೇನೆಗೆ ಸೇರಲೆಂದೇ ಉತ್ತಮವಾಗಿ ಓದುತ್ತೇನೆ. ಸೇನೆಗೆ ಸೇರಿ, ಪಾಕಿಸ್ತಾನ ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡುತ್ತೇನೆ. ಪಾಕಿಸ್ತಾನದ ಮೇಲೆ ನಮ್ಮ ಸೇನೆ ದಾಳಿ ಮಾಡಿದ ಸುದ್ದಿ ಕಂಡು ನನ್ನ ಅಮ್ಮ ಮತ್ತು ನನಗೆ ಖುಷಿಯಾಗಿದೆ. ನಮ್ಮ ಸೇನೆಯ ಬಗ್ಗೆ ಹೆಮ್ಮೆ ಇದೆ ಎಂದಿದ್ದಾನೆ.