Monday, June 15, 2026
Homeಟಾಪ್ ನ್ಯೂಸ್VIRAL VIDEO : ಫ್ಲೈಓವರ್ ಪಿಲ್ಲರ್ ಅನ್ನೇ ಬೆಡ್‌ರೂಮ್ ಮಾಡಿಕೊಂಡಿದ್ದ 'ಸ್ಪೈಡರ್‌ಮ್ಯಾನ್' ಯಾರೆಂದು ಕೊನೆಗೂ ಪತ್ತೆ!

VIRAL VIDEO : ಫ್ಲೈಓವರ್ ಪಿಲ್ಲರ್ ಅನ್ನೇ ಬೆಡ್‌ರೂಮ್ ಮಾಡಿಕೊಂಡಿದ್ದ ‘ಸ್ಪೈಡರ್‌ಮ್ಯಾನ್’ ಯಾರೆಂದು ಕೊನೆಗೂ ಪತ್ತೆ!

ಬೆಂಗಳೂರು: ಸಿಲಿಕಾನ್ ಸಿಟಿಯ (Bengaluru) ಜಾಲಹಳ್ಳಿ ಕ್ರಾಸ್ ಫ್ಲೈಓವರ್ (Flyover) ಪಿಲ್ಲರ್ ಒಳಗಡೆ ನಿಗೂಢವಾಗಿ (Viral Video) ಆ ವಿಚಿತ್ರ ವ್ಯಕ್ತಿಯ ಗುರುತು ಕೊನೆಗೂ ಪತ್ತೆಯಾಗಿದೆ. ಇಡೀ ಬೆಂಗಳೂರಿನ ಜನರೇ ಕಣ್ಣು ಮೂಗು ಬಾಯಿ ಬಿಡುವಂತೆ ಮಾಡಿದ್ದ ಈ ಹೈಡ್ರಾಮಾಕ್ಕೆ ಕಾರಣನಾದ ಆ ಯುವಕನನ್ನು ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಸಣ್ಣ ಹಳ್ಳಿಯ 38 ವರ್ಷದ ರಂಗನಾಥ್ ಎಂದು ಗುರುತಿಸಲಾಗಿದೆ.

ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದು, ತಂಗಲು ನೆಲೆ ಇಲ್ಲದೆ ಪ್ರಾಣದ ಹಂಗು ತೊರೆದು ಫ್ಲೈಓವರ್ ಪಿಲ್ಲರ್ ಅನ್ನೇ ತನ್ನ ಆವಾಸಸ್ಥಾನ ಮಾಡಿಕೊಂಡಿದ್ದ ಅನಾಥ ಹಮಾಲಿ ಕಾರ್ಮಿಕನ ಕರುಣಾಜನಕ ಕಥೆ ಈಗ ಬೆಳಕಿಗೆ ಬಂದಿದೆ.

ಸದಾ ಗಿಜಿಗುಡುವ ಜಾಲಹಳ್ಳಿ ಕ್ರಾಸ್ ಮೇಲ್ಸೇತುವೆಯ ಪಿಲ್ಲರ್‌ಗಳ ನಡುವೆ ತಾಂತ್ರಿಕ ಕಾರಣಗಳಿಗಾಗಿ ಬಿಡಲಾಗುವ ಕಿರಿದಾದ ಖಾಲಿ ಜಾಗದಲ್ಲಿ (expansion gap) ಈ ವ್ಯಕ್ತಿ ದಿನಗಟ್ಟಲೆ ಮಲಗುತ್ತಿರುವುದನ್ನು ಕಳೆದ ವಾರ ಸಾರ್ವಜನಿಕರೊಬ್ಬರು ಆಕಸ್ಮಿಕವಾಗಿ ಪತ್ತೆಹಚ್ಚಿದ್ದರು. ಮುಖ ಕಾಣಿಸದಿದ್ದರೂ ಕತ್ತಲ ಜಾಗದಲ್ಲಿ ಕಾಲಿನ ಬೆರಳುಗಳು ತೇಲುತ್ತಿರುವುದನ್ನು ನೋಡಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ಹೊರಗಡೆ ನೂರಾರು ಜನ ಮುಗಿಬಿದ್ದು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದರೂ, ಅದ್ಯಾವುದರ ಅರಿವಿಲ್ಲದೆ ರಂಗನಾಥ್ ಅಲ್ಲಿ ತನ್ಮಯತೆಯಿಂದ ಮಲಗಿದ್ದ ದೃಶ್ಯ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿತ್ತು.

ಯಾವುದೇ ಏಣಿ ಇಲ್ಲದ ಆ ಎತ್ತರದ ನಿಷೇಧಿತ ಜಾಗಕ್ಕೆ ರಂಗನಾಥ್ ಹೇಗೆ ಹತ್ತುತ್ತಿದ್ದ ಎಂಬ ಪ್ರಶ್ನೆಗೆ ಸ್ಥಳೀಯರು ಮತ್ತು ಆಟೋ ಚಾಲಕರು ಉತ್ತರ ನೀಡಿದ್ದಾರೆ. ರಾತ್ರಿ ಇಡೀ ನಗರದ ವಿವಿಧೆಡೆ ಕೂಲಿ ಕೆಲಸ ಮುಗಿಸುತ್ತಿದ್ದ ಈತ, ಮುಂಜಾನೆ ಯಾರ ಕಣ್ಣಿಗೂ ಬೀಳದಂತೆ ಮೆಟ್ರೋ ಪಿಲ್ಲರ್ ಅಥವಾ ಫ್ಲೈಓವರ್‌ನ ಬದಿಯ ಪೈಪ್‌ಗಳು ಮತ್ತು ಕಾಂಕ್ರೀಟ್ ಗೋಡೆಯ ಸಣ್ಣ ಆಸರೆಗಳನ್ನು ಹಿಡಿದುಕೊಂಡು ಸರ್ಕಸ್ ಮಾಡುವವರಂತೆ ತೂಗಾಡುತ್ತಾ ಒಳಗೆ ನುಸುಳುತ್ತಿದ್ದನು. ಸಂಜೆಯಾಗುತ್ತಿದ್ದಂತೆ ಮತ್ತೆ ಸದ್ದಿಲ್ಲದೆ ಕೆಳಗೆ ಇಳಿದು ಬರುತ್ತಿದ್ದನು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ಅಚ್ಚರಿಯ ಘಟನೆ ಕೇವಲ ಕುತೂಹಲ ಮೂಡಿಸಿಲ್ಲ, ಬದಲಿಗೆ ಬೆಂಗಳೂರಿನ ಸುರಕ್ಷತೆ ಮತ್ತು ವ್ಯವಸ್ಥೆಯ ಬಗ್ಗೆ ಗಂಭೀರ ಚಿಂತೆಗಳನ್ನು ಹುಟ್ಟುಹಾಕಿದೆ. ಹಗಲು ರಾತ್ರಿ ಪೊಲೀಸರು ಓಡಾಡುವ ಇಂತಹ ಆಯಕಟ್ಟಿನ ಜಾಗದ ಅತ್ಯಂತ ಸೂಕ್ಷ್ಮ ಪ್ರದೇಶಕ್ಕೆ ಸಾರ್ವಜನಿಕರೊಬ್ಬರು ಹೀಗೆ ದಿನಗಟ್ಟಲೆ ಹೋಗಿಬರುತ್ತಿದ್ದರೂ ಬಿಬಿಎಂಪಿ ಮತ್ತು ಪೊಲೀಸರ ಕಣ್ಣಿಗೆ ಬೀಳದಿರುವುದು ಭದ್ರತಾ ಲೋಪವನ್ನು ಎತ್ತಿ ತೋರಿಸುತ್ತದೆ.

ನಾಳೆ ದಿನ ಕಿಡಿಗೇಡಿಗಳು ಇಂತಹ ಜಾಗಗಳನ್ನು ವಿಧ್ವಂಸಕ ಕೃತ್ಯಕ್ಕೆ ಬಳಸಿಕೊಂಡರೆ ಗತಿ ಏನು ಎಂಬ ಆತಂಕ ಸೃಷ್ಟಿಯಾಗಿದೆ. ಇದರೊಂದಿಗೆ, ಕೋಟಿ ಕೋಟಿ ಹರಿದಾಡುವ ಸಿಟಿಯಲ್ಲಿ ಬಡ ಕಾರ್ಮಿಕರಿಗೆ ಮಲಗಲು ಒಂದು ಸಣ್ಣ ಸೂರಿಲ್ಲದೆ ಇಂತಹ ಅಪಾಯಕಾರಿ ಜಾಗ ಆಶ್ರಯಿಸಬೇಕಾದ ವಸತಿಹೀನರ ಕಠಿಣ ವಾಸ್ತವವೂ ಅನಾವರಣಗೊಂಡಿದೆ.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಂಗನಾಥ್‌ನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ, ವಿಚಾರಣೆ ನಡೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಇತ್ತ ಬಿಬಿಎಂಪಿ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಆ ಪಿಲ್ಲರ್‌ನ ಖಾಲಿ ಜಾಗಕ್ಕೆ ಕಟ್ಟುನಿಟ್ಟಾಗಿ ಕಬ್ಬಿಣದ ಜಾಲರಿಯನ್ನು (Mesh) ಅಳವಡಿಸಿ ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!