ರಾಜಸ್ಥಾನ : ಭಾರತ ಉಗ್ರರ ಕ್ಯಾಂಪ್ಗಳಿಗೆ ದಾಳಿ ಮಾಡಿದ್ರೆ, ಪಾಪಿ ಪಾಕಿಸ್ತಾನ ಭಾರತೀಯ ನಾಗರಿಕರನ್ನೇ ಗುರಿ ಮಾಡಿ ದಾಳಿ ಮಾಡುವ ಯತ್ನ ಮಾಡುತ್ತಿದೆ. ಆದ್ದರಿಂದ ಯೋಧರ ರಜೆಗಳನ್ನು ರದ್ದು ಮಾಡಲಾಗಿದ್ದು, ರಜೆ ಮೇಲೆ ಬಂದಿದ್ದ ಬಹುತೇಕ ಎಲ್ಲಾ ಯೋಧರು ದೇಶಸೇವೆಗಾಗಿ ತೆರಳುತ್ತಿದ್ದಾರೆ. ಇದ್ರ ಮಧ್ಯೆ ರಾಜಸ್ಥಾನ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ರಾಜಸ್ಥಾನದ ಜುಂಜುವಿನ ಚೌರಾಡಿ ಅಗುನಿ ಎಂಬಲ್ಲಿ ಸೈನಿಕ ರಾಜು ಸಿಂಗ್ ರಾಥೋಡ್ ಕೂಡ ದೇಶ ಸೇವೆಗೆ ಹೊರಟರು. ರಾಜು ಸಿಂಗ್ ಏಪ್ರಿಲ್ 19 ರಿಂದ ಒಂದು ತಿಂಗಳ ರಜೆ ತೆಗೆದುಕೊಂಡು ತಮ್ಮ ಮಕ್ಕಳೊಂದಿಗೆ ಸಮಯವನ್ನು ಕಳೆಯಲು ಬಂದಿದ್ದರು. ಶಹಜಹಾನ್ಪುರದಲ್ಲಿರುವ ತಮ್ಮ ಅತ್ತೆಯ ಮನೆಗೂ ಭೇಟಿ ನೀಡಿದ್ದರು. ಆಗ ಏಕಾಏಕಿ ರಜೆ ರದ್ದುಗೊಂಡಿದ್ದು, ಕರ್ತವ್ಯಕ್ಕೆ ಮರಳಬೇಕು ಎಂಬ ಸೂಚನೆ ಬಂದಿತ್ತು.
ರಾಜು ಸಿಂಗ್ ಹೊರಡಲು ಸಿದ್ಧವಾಗುತ್ತಿದ್ದಂತೆ, ಇಡೀ ಹಳ್ಳಿಯ ಜನರು ಸೇರಿ ಬೀಳ್ಕೊಟ್ಟರು. ರಾಜು ತಾಯಿ ಕಣ್ಣೀರು ತುಂಬಿದ ಕಣ್ಣುಗಳೊಂದಿಗೆ, ವಿಜಯಶಾಲಿಯಾಗಿ ಹಿಂತಿರುಗುವಂತೆ ಆಶೀರ್ವದಿಸಿದರು. ರಾಜು ತಂದೆ ನಿವೃತ್ತ ಸುಬೇದಾರ್ ಸುಮೇರ್ ಸಿಂಗ್ ರಾಥೋಡ್, ‘ಮಗನೇ, ಹಿಂತಿರುಗಿ ನೋಡಬೇಡ, ಕರ್ತವ್ಯ ಮೊದಲು’ ಎಂದು ಮಗನಿಗೆ ಹಾರ ಹಾಕಿ ಸೈನಿಕನ ಮಾತುಗಳಿಂದ ಆಶೀರ್ವದಿಸಿದರು.
ರಾಜು ಪತ್ನಿ ರೂಪ್ ಕನ್ವರ್ ಪಹಲ್ಗಾಮ್ನಲ್ಲಿ ಉಗ್ರರು ಮಾಡಿದ ನೋವನ್ನು ನೆನಪಿಸಿದರು. ರಾಷ್ಟ್ರವನ್ನು ರಕ್ಷಿಸುವಂತೆ ಕೇಳಿಕೊಂಡರು. ಸ್ಥಳೀಯ ಮಹಿಳೆಯರು ಜಾನಪದ ಗೀತೆಗಳನ್ನು ಹಾಡಿದರು, ಮಕ್ಕಳು ತ್ರಿವರ್ಣ ಧ್ವಜ ಬೀಸಿದರು, ಗ್ರಾಮಸ್ಥರು ಹೆಮ್ಮೆಯಿಂದ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುವಮೂಲಕ ದೇಶಭಕ್ತಿ ಮೆರೆದಿದ್ದಾರೆ.
ಆರು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಜು ಸಿಂಗ್ಗೆ ಇದು ಮೊದಲ ಯುದ್ಧದ ಅನುಭವ. ‘ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ, ಆದರೆ ಶತ್ರುಗಳಿಗೆ ಸೂಕ್ತ ಉತ್ತರ ನೀಡುತ್ತೇನೆ’ ಎಂದಿದ್ದಾನೆ.