ಒಕ್ಕಲಿಗರ ಸಮುದಾಯದ ವೀರರು ಟಿಪ್ಪುವನ್ನು ಕೊಂದರೆಂದು ಬಿಜೆಪಿಗರು ಮಾಡುತ್ತಿರುವ ವಿವಾದಾತ್ಮಕ ಪ್ರಚಾರಕ್ಕೆ ತಾರ್ಕಿಕ ಅಂತ್ಯ ಲಭಿಸಿದೆ. ಒಕ್ಕಲಿಗ ಸಮುದಾಯದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಇತಿಹಾಸದ ಜ್ಞಾನವಿಲ್ಲದೆ ಮಾತನಾಡಬಾರದು ಎಂದಿದ್ದಾರೆ.
ಉರಿಗೌಡ-ನಂಜೇಗೌಡ ಅವರ ಚಿತ್ರಗಳನ್ನು ನಿರ್ಮಿಸುವುದಾಗಿ ಘೋಷಣೆ ಮಾಡಿದ್ದ ಮುನಿರತ್ನರನ್ನು ಕರೆದು ʼಬುದ್ಧಿʼ ಹೇಳಿದ ಶ್ರೀಗಳು, ಸಿಟಿ ರವಿ, ಅಶೋಕ್ ಯಾರೇ ಇರಲಿ, ಈ ಬಗ್ಗೆ ಮಾತನಾಡುತ್ತಿರುವವರು ಇದನ್ನು ನಿಲ್ಲಿಸಬೇಕು. ಸಮುದಾಯದೊಳಗೆ ಗೊಂದಲ ಹುಟ್ಟಿಸುವುದನ್ನು ಮಾಡಬಾರದು ಎಂದು ಹೇಳಿದ್ದಾರೆ.
ಉರಿಗೌಡ-ನಂಜೇಗೌಡರ ಬಗ್ಗೆ ಇತಿಹಾಸ ತಜ್ಞರು ಮಾತನಾಡಬೇಕು. ಸಮುದಾಯದ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡಬಾರದು, ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಶ್ರೀಗಳು ಹೇಳಿದ್ದಾರೆ.
ಉರಿಗೌಡ, ನಂಜೇಗೌಡರನ್ನು ಬಳಸಿ ಒಕ್ಕಲಿಗ ಮತಬ್ಯಾಂಕ್ ಮೇಲೆ ಕಣ್ಣಿಟ್ಟಿದ್ದ ಬಿಜೆಪಿಗೆ ಇದೀಗ ಭಾರೀ ಹಿನ್ನಡೆ ಉಂಟಾಗಿದೆ. ಅಲ್ಲದೆ, ಒಕ್ಕಲಿಗ ಸಮುದಾಯದ ಪ್ರಬಲ ಶ್ರೀಗಳೇ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವುದು ಮುಜುಗರವನ್ನೂ ಸೃಷ್ಟಿಸಿದೆ.