2023 ರ ಕರ್ನಾಟಕ ವಿಧಾನಸಭಾ ಚುನಾವಣಾ ಕಾವು ಜೋರಾಗಿಯೇ ಇದೆ. ಈ ಬಾರಿಯೂ ಹಲವು ಪಕ್ಷಗಳು ರಾಜ್ಯ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿವೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸಿದ್ದ ಶಿವಸೇನೆಯ ಉದ್ಧವ್ ಠಾಕ್ರೆ ಬಣವು ಈ ಬಾರಿ ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸಲು ಚಿಂತನೆ ನಡೆಸುತ್ತಿದೆ.
ಹಿಂದುತ್ವ ಮತ್ತು ಮರಾಠ ಸ್ಪಿರಿಟ್ ಅನ್ನು ಮತವಾಗಿ ಪರಿವರ್ತಿಸಬಲ್ಲ ಛಾತಿ ಇರುವ ಶಿವಸೇನೆ ಸ್ಪರ್ಧೆಯು ಬಿಜೆಪಿಯ ಕೆಲವು ಮತಗಳನ್ನಾದರೂ ಸೆಳೆಯುವ ಸಾಧ್ಯತೆ ಇದೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಈಗಾಗಲೇ ಚಿಂತನೆ ನಡೆಸಲಾಗಿದೆ ಎಂದು ಠಾಕ್ರೆ ಬಣದ ಮೂಲಗಳು ಹೇಳಿವೆ.
ಕಳೆದ ಬಾರಿ 60 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಪಕ್ಷವು ಈ ಬಾರಿ 150 ಸ್ಥಾನಗಳಲ್ಲಿ ಸ್ಪರ್ಧಿಸಲು ತಯಾರಾಗಿದೆ. ಪಕ್ಷದ ಹೆಸರು ಮತ್ತು ಚಿಹ್ನೆಯ ಬಗ್ಗೆ ಗೊಂದಲ ಇರುವುದರಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ತಡವಾಗಿದೆ. ಗೊಂದಲ ಮುಗಿದ ಬಳಿಕ ಪ್ರಕಟ ಮಾಡಲಾಗುವುದು ಎಂದು ರಾಜ್ಯಾಧ್ಯಕ್ಷ ಕುಮಾರ್ ಹಕಾರಿ ತಿಳಿಸಿದ್ದಾರೆ.
ಪ್ರಚಾರಕ್ಕೆ ಆದಿತ್ಯ ಠಾಕ್ರೆ, ಸಂಜಯ್ ರಾವತ್ ಮೊದಲಾದ ನಾಯಕರು ಬರಲಿದ್ದಾರೆ ಎನ್ನಲಾಗಿದೆ. ಮರಾಠ ಸಮುದಾಯ ಪ್ರಬಲವಾಗಿರುವ ಬೆಳಗಾವಿ ಭಾಗದಲ್ಲಿ ಶಿವಸೇನೆ ಸ್ಪರ್ಧೆಯು ಬಿಜೆಪಿಗೆ ತೀವ್ರ ಹಿನ್ನಡೆಯಾಗುವ ಸಾಧ್ಯತೆ ಇದೆ. ತಮ್ಮ ಸರ್ಕಾರ ಉರುಳಲು ಕಾರಣವಾದ ಬಿಜೆಪ ಮೇಲೆ ಈಗಾಗಲೇ ತೀವ್ರ ಅಸಮಾಧನದಲ್ಲಿರುವ ಉದ್ಧವ್ ಬಣವನ್ನು ಕಾಂಗ್ರೆಸ್ ಹೇಗೆ ಬಳಸಲಿದೆ ಎನ್ನುವುದರ ಮೇಲೆ ಬಿಜೆಪಿಯ ಭವಿಷ್ಯ ನಿರ್ಧಾರವಾಗಲಿದೆ.