ಮಧ್ಯಪ್ರದೇಶ: ಆಸ್ಪತ್ರೆಯೊಂದರಲ್ಲಿ (Hospital) ಎರಡು ನವಜಾತ ಶಿಶುಗಳಿಗೆ ಇಲಿ ಕಚ್ಚಿ (Rat Bite), ಒಂದು ಮಗು ಸಾವನ್ನಪ್ಪಿರುವ ಘಟನೆ (Shocking News) ಮಧ್ಯಪ್ರದೇಶದ (Madhyapradesh) ಇಂದೋರ್ನ ಸರ್ಕಾರಿ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ನಡೆದಿದೆ.
ಸಿಬ್ಬಂದಿಗಳ ಅಮಾನತು
ರಾಜ್ಯದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಶಿಶುಗಳ ಬೆರಳಿಗೆ ಇಲಿ ಕಚ್ಚಿರುವುದು ನಿಜಕ್ಕೂ ಆಘಾರತಕಾರಿ ವಿಚಾರವಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಸ್ಪತ್ರೆ ಆಡಳಿತವು ತನ್ನ ನರ್ಸಿಂಗ್ ಸೂಪರಿಂಟೆಂಡೆಂಟ್ ಅನ್ನು ಹುದ್ದೆಯಿಂದ ತೆಗೆದುಹಾಕಿದ್ದು, ಜೊತೆಗೆ ಇಬ್ಬರು ನರ್ಸಿಂಗ್ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ. ಈ ವಿಚಾರವಾಗಿ ಸರ್ಕಾರಿ ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನ ಡೀನ್ ಡಾ. ಅರವಿಂದ್ ಘಂಘೋರಿಯಾ ಪ್ರತಿಕ್ರಿಯೆ ನೀಡಿದ್ದು, ಆಸ್ಪತ್ರೆಯಲ್ಲಿ ಕೀಟ ನಿಯಂತ್ರಣ ಮತ್ತು ಶುಚಿಗೊಳಿಸುವ ಜವಾಬ್ದಾರಿಯನ್ನ ನೀಡಲಾಗಿರುವ ಸಂಸ್ಥೆಯಾದ ದಿ ಅಗೈಲ್ ಕಂಪನಿಗೆ ₹1 ಲಕ್ಷ ದಂಡ ವಿಧಿಸಲಾಗಿದ್ದು, ಅದರ ಜೊತೆಗೆ ಶೋಕಾಸ್ ನೋಟಿಸ್ ಸಹ ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಎರಡು ಶಿಶುಗಳಲ್ಲಿ ಒಂದು ಗಂಡು ಹಾಗೂ ಇನ್ನೊಂದು ಹೆಣ್ಣಾಗಿದ್ದು, ಇಬ್ಬರಿಗೂ ಇಲಿ ಕಚ್ಚಿದೆ. ಆದರೆ ಅದರಲ್ಲಿ ಹೆಣ್ಣು ಮಗು ಆಗಲೇ ನ್ಯುಮೋನಿಯಾದಿಂದ ಬಳಲುತ್ತಿದ್ದ ಕಾರಣ ಗಂಭೀರ ಪರಿಸ್ಥಿತಿಯಲ್ಲಿ ಇತ್ತು. ಅಲ್ಲದೇ, ಆ ಮಗು ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಇತ್ತು ಎಂದು ಅವರು ತಿಳಿಸಿದ್ದಾರೆ. ಇನ್ನು ವಿವಿಧ ಜನ್ಮಜಾತ ವಿರೂಪಗಳೊಂದಿಗೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಇನ್ನೊಂದು ಮಗು ಆರೋಗ್ಯ ಈಗ ಸ್ಥಿರವಾಗಿದೆ ಎಂದು ಹೇಳಿದ್ದಾರೆ.
ಪ್ರದೇಶದಲ್ಲಿ ಭಾರೀ ಮಳೆ ಮತ್ತು ಪೈಪ್ ಒಡೆದ ಕಾರಣ ಕಳೆದ ಮೂರು ನಾಲ್ಕು ದಿನಗಳಲ್ಲಿ ಆಸ್ಪತ್ರೆಯಲ್ಲಿ ಇಲಿಗಳು ಕಾಣಿಸಿಕೊಂಡಿವೆ. ಮೂರು ನಾಲ್ಕು ದಿನಗಳ ಹಿಂದೆ ಇಂದೋರ್ನಲ್ಲಿ ಭಾರೀ ಮಳೆಯಾಗಿದೆ, ಇದರಿಂದ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಅನೇಕ ಭಾಗಗಳಲ್ಲಿ ನೀರು ನಿಲ್ಲುತ್ತಿತ್ತು. ಈ ಸಮಯದಲ್ಲಿ ಇಲಿಗಳು ಪೈಪ್ ಮೂಲಕ ಬಂದಿವೆ. ಆದರೆ ಈ ಬಗ್ಗೆ ನರ್ಸಿಂಗ್ ಅಧಿಕಾರಿಗಳು ಸಮಸ್ಯೆಯ ಬಗ್ಗೆ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾದ ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಅಲ್ಲದೇ, ಘಟನೆಯ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸಲು ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿದ್ದು, ಇಡೀ ಆಸ್ಪತ್ರೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಕೀಟ ನಿಯಂತ್ರಣ ಕೆಲಸ ಮಾಡಲು ಕಂಪನಿಗೆ ಹೇಳಲಾಗಿದೆ.
ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಶಿಶುವಿನ ಬೆರಳು ತಿಂದ ಇಲಿ!#CrimeNews #MGMHospital #indore #hospital #Rat #ratbite #MadhyaPradesh #KannadaNews#navasamajanews pic.twitter.com/1nH2hu7lID
— navasamaja (@navasamajanews) September 3, 2025
ಇಲಿ ಸಮಸ್ಯೆ ನಿಭಾಯಿಸಲು ಕ್ರಮ
ಹಾಗೆಯೇ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅಶೋಕ್ ಯಾದವ್ ಮಾತನಾಡಿದ್ದು, ಮಗುವಿನ ಕೈಯಲ್ಲಿ ಮೊದಲ ಇಲಿ ಕಚ್ಚಿರುವುದು ಗಮನಕ್ಕೆ ಬಂದಿದೆ. ಮೊದಲು ಇದನ್ನ ಸೋಂಕು ಎಂದು ಪರಿಗಣಿಸಲಾಗಿತ್ತು. ಆದರೆ ಇಲಿಗಳು ಕಂಡಾಗ, ಕಚ್ಚಿರುವುದು ತಿಳಿದು ಬಂತು. ಮಗುವಿಗೆ ಎರಡು ಸ್ಥಳಗಳಲ್ಲಿ ಕಚ್ಚಿದೆ. ಇಲಿ ಸಮಸ್ಯೆಯನ್ನು ನಿಭಾಯಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಈ ಘಟನೆಯ ಬಗ್ಗೆ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಶಾಸಕ ಉಮಾಂಗ್ ಸಿಂಘರ್, ಸಹ ಪ್ರತಿಕ್ರಿಯೆ ನೀಡಿದ್ದು, ಆಸ್ಪತ್ರೆಯಲ್ಲಿ ಐದು ವರ್ಷಗಳಿಂದ ಕೀಟ ನಿಯಂತ್ರಣ ಮಾಡಲಾಗಿಲ್ಲ ಎಂದು ಆರೋಪ ಮಾಡಿದ್ದಾರೆ. ಅಲ್ಲದೇ, ಈ ವಿಚಾರವಾಗಿ ಬಿಜೆಪಿ ಸರ್ಕಾರವನ್ನ ಅವರು ಟೀಕಿಸಿದ್ದು, ನವಜಾತ ಶಿಶುಗಳ ಮೇಲೆ ಕರುಣೆ ತೋರಿಸಬೇಕು ಸರ್ಕಾರ, ಇಂದೋರ್ನಲ್ಲಿರುವ ಆಸ್ಪತ್ರೆಯ ಸ್ಥಿತಿಯನ್ನು ನೋಡಿ. ಮುಗ್ಧ ನವಜಾತ ಶಿಶುಗಳನ್ನು ಇಲಿಗಳು ಕಚ್ಚುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇದಿಷ್ಟೇ ಅಲ್ಲದೇ, ಇದು ಕೇವಲ ನಿರ್ಲಕ್ಷ್ಯವಲ್ಲ, ಬದಲಾಗಿ ಹತ್ಯಾಕಾಂಡ, ಆಸ್ಪತ್ರೆಗಳು ಜೀವಗಳನ್ನು ಉಳಿಸಲು ಇವೆ, ಆದರೆ ಬಿಜೆಪಿ ಅವುಗಳನ್ನು ಸಾವಿನ ಗುಹೆಗಳನ್ನಾಗಿ ಮಾಡಿದೆ ಎಂದು ಕಿಡಿ ಕಾರಿದ್ದಾರೆ.