ನವದೆಹಲಿ: ಡಿಕೆ ಶಿವಕುಮಾರ್ ವಿರುದ್ಧ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆಂದು ಎನ್ಡಿಟಿವಿ ಹೇಳಿಕೆಯನ್ನು ತಿರುಚಿ ವರದಿ ಮಾಡಿದ ಬಳಿಕ ಕಾಂಗ್ರೆಸ್ ನಾಯಕರು ಒಟ್ಟಿಗೆ ಲಂಚ್ ಸೇವಿಸುವ ಚಿತ್ರವನ್ನು ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.
ಮುಖ್ಯಮಂತ್ರಿ ಸ್ಥಾನದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿರುವ ಹಿನ್ನಲೆಯಲ್ಲಿ ಈ ಚಿತ್ರವನ್ನು ಸಿದ್ದರಾಮಯ್ಯ ಟ್ವೀಟ್ ಮಾಡಿ ನಮ್ಮ ನಡುವೆ ದೋಸ್ತಿ ಚನ್ನಾಗಿಯೇ ಇದೆ ಎಂಬಂರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ದೆಹಲಿಯಲ್ಲಿ ಪಕ್ಷದ ಸಂಗಾತಿಗಳ ಜೊತೆ ಮಧ್ಯಾಹ್ನದ ಊಟ ಮಾಡುತ್ತಾ ಒಂದಷ್ಟು ಹೊತ್ತು ಕಳೆದದ್ದು ಖುಷಿಯಾಯಿತು. ಕಾಂಗ್ರೆಸ್ ಕುಟುಂಬದಲ್ಲಿ ಪ್ರೀತಿ, ವಿಶ್ವಾಸಕ್ಕೇನು ಬರವೆ? ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಹಂಚಿಕೊಂಡಿರುವ ಚಿತ್ರದಲ್ಲಿ ಡಿಕೆ ಶಿವಕುಮಾರ್, ಬಿಕೆ ಹರಿಪ್ರಸಾದ್, ಜಿ ಪರಮೇಶ್ವರ್, ಎಂಬಿ ಪಾಟೀಲ್, ರಣದೀಪ್ ಸುರ್ಜೆವಾಲ ಮೊದಲಾದ ನಾಯಕರು ಒಂದೇ ಟೇಬಲಿನಲ್ಲಿ ಕೂತಿರುವುದು ಕಾಣಬಹುದು.