ಶ್ರೀನಗರ: ಜಮ್ಮು-ಕಾಶ್ಮೀರದ ರಾಂಬನ್ ಜಿಲ್ಲೆಯ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ.
ಕಿರಣ್ ರಿಜಿಜು ಶನಿವಾರ ಸಂಜೆ ಕಾಶ್ಮೀರದಿಂದ ಹಿಂತಿರುಗುತ್ತಿದ್ದ ವೇಳೆ ರಾಂಬನ್ ಜಿಲ್ಲೆಯ ಬನಿಹಾಲ್ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಇದೊಂದು ಸಣ್ಣ ಅಪಘಾತ ಅಷ್ಟೆ, ಸಚಿವ ರಿಜಿಜು ಸುರಕ್ಷಿತವಾಗಿದ್ದಾರೆ. ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಎಡಿಜಿ ಮುಖೇಶ್ ಸಿಂಗ್ ಹೇಳಿದ್ದಾರೆ.
ಕಾನೂನು ಸೇವೆಗಳ ಶಿಬಿರದಲ್ಲಿ ಪಾಲ್ಗೊಳ್ಳಲು ಜಮ್ಮುವಿನಿಂದ ಉಧಮ್ಪುರಕ್ಕೆ ಕೇಂದ್ರ ಸಚಿವ ಕಿರಣ್ ರಿಜಿಜು ಪ್ರಯಾಣಿಸುತ್ತಿದ್ದರು. ಅಪಘಾತಕ್ಕೂ ಮುನ್ನ ಉಧಂಪುರದಿಂದ ಶ್ರೀನಗರಕ್ಕೆ ಹೋಗುವ ದಾರಿಯಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಸುರಂಗದ ಮೂಲಕ ತಮ್ಮ ಬೆಂಗಾವಲು ಪಡೆ ಸಾಗುತ್ತಿರುವ ವಿಡಿಯೋವನ್ನು ಕಿರಣ್ ರಿಜಿಜು ಅವರು ಟ್ವೀಟ್ ಮಾಡಿದ್ದರು.