ಹಾಸನ: ಪ್ರಸಿದ್ಧ ಪ್ರವಾಸಿ ತಾಣವಾದ ಹಾಸನದ(Hasan) ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ಹೋಗಿದ್ದ ಬೆಂಗಳೂರು(Bengaluru) ಮೂಲದ ಮೂವರು ಯುವಕರು ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ(Tragedy).
ಧರ್ಮಸ್ಥಳ ಪ್ರವಾಸ ಮುಗಿಸಿ ವಾಪಸಾಗುವಾಗ ನಡೆದ ದುರಂತ
ಪೊಲೀಸ್ ಮೂಲಗಳ ಪ್ರಕಾರ, ಬೆಂಗಳೂರು ಮೂಲದ ಹತ್ತು ಜನ ಯುವಕರ ತಂಡವೊಂದು ಕಾರಿನಲ್ಲಿ ಧರ್ಮಸ್ಥಳ ಪ್ರವಾಸಕ್ಕೆ ತೆರಳಿತ್ತು. ಶ್ರೀಕ್ಷೇತ್ರ ಮಂಜುನಾಥ ಸ್ವಾಮಿಯ ದರ್ಶನ ಮುಗಿಸಿ ವಾಪಸ್ ರಾಜಧಾನಿಗೆ ಬರುವಾಗ ಮಾರ್ಗಮಧ್ಯೆ ಹಾಸನ ತಾಲೂಕಿನ ಗೊರೂರು ಬಳಿಯಿರುವ ಪ್ರಸಿದ್ಧ ಐತಿಹಾಸಿಕ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ಬಂದಿದ್ದಾರೆ. ಈ ವೇಳೆ ಚರ್ಚ್ ಸುತ್ತಲೂ ಆವರಿಸಿರುವ ಹಿನ್ನೀರನ್ನು ಕಂಡು ಯುವಕರು ನೀರಿನಲ್ಲಿ ಈಜಲು ಮುಂದಾಗಿದ್ದಾರೆ. ಆದರೆ, ಈಜು ಬಾರದಿದ್ದರೂ ಯುವಕರು ಹಿನ್ನೀರಿಗೆ ಇಳಿದಿರುವುದೆ ಈ ಭೀಕರ ದುರಂತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಚರಣ್ (20), ಮಿಲನ್ (23) ಮತ್ತು ಮಣಿಕಂಠ (20) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಯುವಕರು ನೀರಿನ ಆಳ ತಿಳಿಯದೆ ಇಳಿದು ಮುಳುಗುತ್ತಿದ್ದಂತೆ ತೀರದಲ್ಲಿದ್ದ ಉಳಿದ ಸ್ನೇಹಿತರು ಆತಂಕಗೊಂಡಿದ್ದಾರೆ. ನಿರ್ಜನ ಪ್ರದೇಶವಾದ್ದರಿಂದ ಸಕಾಲಕ್ಕೆ ಯಾವುದೇ ಸಹಾಯ ಸಿಗಲಿಲ್ಲ. ಪರಿಣಾಮವಾಗಿ ಮೂವರು ಗೆಳೆಯರ ಕಣ್ಣೆದುರೆ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಗೊರೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಗೊರೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, ಈಜುಗಾರರ ನೆರವಿನೊಂದಿಗೆ ಮೃತದೇಹಗಳನ್ನು ಹೊರತೆಗೆಯಲು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ಪಂಢರಪುರದಲ್ಲಿ ಭೀಕರ ದುರಂತ, ಭಕ್ತರಿದ್ದ ವಾಹನ ಬಾವಿಗೆ ಬಿದ್ದು 14 ಯಾತ್ರಿಗಳ ಸಾ*ವು!