ನವದೆಹಲಿ: ನಾವು ನಿತ್ಯವೂ ಬೆಳಗಿನ ಉಪಾಹಾರಕ್ಕೆ (Breakfast) ಬಳಸುವ ಹಾಲು (Milk), ಪಲ್ಯಕ್ಕೆ ಬಳಸುವ ಪನೀರ್ (Paneer), ಅಡುಗೆ ಮನೆಯ ಮಸಾಲೆ ಪದಾರ್ಥಗಳು (Spices) ಹಾಗೂ ಆರೋಗ್ಯಕರ ಎಂದು ನಂಬಿ ಕೊಳ್ಳುವ ಪ್ಯಾಕೆಟ್ ಚಾನಾಗಳು ನಿಜಕ್ಕೂ ಸುರಕ್ಷಿತವೇ? ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲು ಜಗತ್ತು ಸಜ್ಜಾಗುತ್ತಿರುವ ಈ ಹೊತ್ತಿನಲ್ಲೇ ಭಾರತದ ಆಹಾರ ಪರಿಸರ ವ್ಯವಸ್ಥೆಯನ್ನು ಹೆದರಿಸುವಂತಹ ಆಘಾತಕಾರಿ ಅಂಕಿ-ಅಂಶವೊಂದು ಹೊರಬಿದ್ದಿದೆ. ಕಳೆದ 2025-26ರ ಆರ್ಥಿಕ ವರ್ಷದಲ್ಲಿ (FY26) ದೇಶಾದ್ಯಂತ ಪರೀಕ್ಷಿಸಲಾದ ಆಹಾರದ ಸ್ಯಾಂಪಲ್ಗಳಲ್ಲಿ ಪ್ರತಿ ಆರರಲ್ಲಿ ಒಂದು ಸ್ಯಾಂಪಲ್ ಸುರಕ್ಷತೆ ಮತ್ತು ಗುಣಮಟ್ಟದ ಪರೀಕ್ಷೆಯಲ್ಲಿ ಸಂಪೂರ್ಣವಾಗಿ ಫೇಲ್ ಆಗಿದೆ. ಈ ಅಂಕಿ-ಅಂಶವು ಕೇವಲ ನಿಯಂತ್ರಕ ಸಂಖ್ಯೆಯಲ್ಲ, ಬದಲಿಗೆ ಭಾರತೀಯರು ತಾವು ತಿನ್ನುವ ಆಹಾರದ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದ್ದಾರೆಯೇ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಭಾರತೀಯರನ್ನು ಭಯಕ್ಕೆ ದೂಡಿದ ಸುಳ್ಳು ಸುದ್ದಿ
ಆಹಾರದಲ್ಲಿ ಕಂಡುಬರುತ್ತಿರುವ ಕಲಬೆರಕೆ ಮತ್ತು ಮಾಲಿನ್ಯದಿಂದಾಗಿ ಭಾರತದಲ್ಲಿ ಗ್ರಾಹಕರು ನಿತ್ಯದ ಅಗತ್ಯ ವಸ್ತುಗಳನ್ನು ಕೊಳ್ಳಲು ಹಾಗೂ ಸೇವಿಸಲು ಭಯಪಡುವಂತಹ ವಾತಾವರಣ ಸೃಷ್ಟಿಯಾಗಿದೆ ಎಂದು ಆರಿಗಾ ರಿಸರ್ಚ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಸೌರಭ್ ಅರೋರಾ ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಎಚ್ಚರಿಕೆಗಳು ಮತ್ತು ಸುಳ್ಳು ಸುದ್ದಿಗಳು ಗ್ರಾಹಕರಲ್ಲಿ ಮತ್ತಷ್ಟು ಗೊಂದಲ ಮೂಡಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂದಾಜಿನ ಪ್ರಕಾರ ಜಾಗತಿಕವಾಗಿ ಕಲುಷಿತ ಆಹಾರ ಸೇವನೆಯಿಂದ ವರ್ಷಕ್ಕೆ 60 ಕೋಟಿ ಜನ ಅನಾರೋಗ್ಯಕ್ಕೆ ಒಳಗಾಗುತ್ತಿದ್ದು, 4.2 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲೂ ಇಂತಹ ವಿಷಪೂರಿತ ಆಹಾರದಿಂದಾಗಿ ತಕ್ಷಣದ ಅಜೀರ್ಣ ಅಥವಾ ಫುಡ್ ಪಾಯ್ಸನಿಂಗ್ ಮಾತ್ರವಲ್ಲದೆ, ದೀರ್ಘಕಾಲದ ಬಳಕೆಯಿಂದ ಯಕೃತ್ (ಲಿವರ್) ಹಾನಿ, ನರ ದೌರ್ಬಲ್ಯ ಮತ್ತು ಮಾರಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಪ್ರಮುಖವಾಗಿ ಮಕ್ಕಳು, ವೃದ್ಧರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರು ಇದರ ನೇರ ಬಲಿಪಶುಗಳಾಗುತ್ತಿದ್ದಾರೆ ಎಂದು ಆರೋಗ್ಯ ತಜ್ಞ ಡಾ. ವಿಮಲ್ ಪಹುಜಾ ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಗರ್ಭಿಣಿಗೆ ನೀಡಿದ ಪೌಷ್ಟಿಕ ಆಹಾರದ ಪ್ಯಾಕೆಟ್ನಲ್ಲಿ ಸತ್ತ ಹಾವಿನ ಮರಿ ಪತ್ತೆ..!!
ಈ ಆಹಾರ ಮಾಲಿನ್ಯದ ಜಾಲವು ಕೇವಲ ಜನರ ಆರೋಗ್ಯಕ್ಕೆ ಮಾತ್ರವಲ್ಲದೆ, ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಿ ಪ್ರಾಮಾಣಿಕವಾಗಿ ಉದ್ಯಮ ನಡೆಸುವ ಕಂಪನಿಗಳಿಗೂ ಭಾರಿ ಆರ್ಥಿಕ ನಷ್ಟ ಮತ್ತು ಅಪಕೀರ್ತಿಯನ್ನು ತರುತ್ತಿದೆ ಎಂದು ನುಫ್ಲವರ್ ಫುಡ್ಸ್ ಸಂಸ್ಥೆಯ ಸಿಇಒ ಅಕ್ಷತ್ ಖಂಡೇಲ್ವಾಲ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಬೃಹತ್ ಆಹಾರ ವ್ಯವಸ್ಥೆಯು ಕೇವಲ ಫ್ಯಾಕ್ಟರಿಗಳಿಗೆ ಸೀಮಿತವಾಗಿಲ್ಲ. ಇದು ದೇಶದ ಮೂಲಸೌಕರ್ಯ, ಕುಡಿಯುವ ನೀರಿನ ಗುಣಮಟ್ಟ ಹಾಗೂ ನೈರ್ಮಲ್ಯದ ಮಾನದಂಡಗಳೊಂದಿಗೆ ಬೆಸೆದುಕೊಂಡಿದೆ. ಅದರಲ್ಲೂ ಕೋಟ್ಯಂತರ ಸಣ್ಣ ಉದ್ಯಮಗಳಿರುವ ದೇಶದ ಅನೌಪಚಾರಿಕ ಆಹಾರ ಮಾರುಕಟ್ಟೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿದೆ ಎಂದು ರೇಸೆನ್ಸ್ ಸಂಸ್ಥೆಯ ಎಂಡಿ ಸಂಜಯ್ ಕುಮಾರ್ ವಿಶ್ಲೇಷಿಸಿದ್ದಾರೆ. ಪ್ರಸ್ತುತ ಈ ಆತಂಕವು ಕಚೇರಿಗಳ ಕೆಫೆಟೇರಿಯಾಗಳಿಗೂ ವಿಸ್ತರಿಸಿದ್ದು, ನೌಕರರು ಜಾಗೃತರಾಗುತ್ತಿರುವುದರಿಂದ ಹಂಗರ್ಬಾಕ್ಸ್ನಂತಹ ಸಂಸ್ಥೆಗಳು ಡಿಜಿಟಲ್ ಮಾನಿಟರಿಂಗ್ ಹಾಗೂ ಕಟ್ಟುನಿಟ್ಟಾದ ಎಫ್ಎಸ್ಎಸ್ಎಐ (FSSAI) ನಿಯಮಗಳ ಮೊರೆ ಹೋಗುತ್ತಿವೆ. ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳಲು ಗ್ಲಾಡ್ಫುಲ್ನಂತಹ ಬ್ರ್ಯಾಂಡ್ಗಳು ಪಾಮ್ ಆಯಿಲ್, ಮೈದಾ ಹಾಗೂ ಕೃತಕ ಬಣ್ಣಗಳಿಲ್ಲದ ಕ್ಲೀನ್-ಲೇಬಲ್ ವಿಧಾನ ಮತ್ತು ಪಾರದರ್ಶಕತೆಗೆ ಆದ್ಯತೆ ನೀಡುತ್ತಿವೆ.
ಗ್ರಾಹಕರು ಏನೆಲ್ಲಾ ಮಾಡಬೇಕು?
ದೇಶದ 140 ಕೋಟಿಗೂ ಅಧಿಕ ಜನಸಂಖ್ಯೆಗೆ ಹೋಲಿಸಿದರೆ ನಮ್ಮ ಆಹಾರ ಸುರಕ್ಷತಾ ನಿಯಂತ್ರಣ ಸಂಸ್ಥೆಗಳು ಮತ್ತು ಜಾರಿ ವ್ಯವಸ್ಥೆಗಳ ಮೂಲಸೌಕರ್ಯ ಇಂದಿಗೂ ತಾರತಮ್ಯದಿಂದ ಕೂಡಿದೆ. ಕಾಗದದ ಮೇಲಿರುವ ನಿಯಮಗಳು ಸರಿಯಾಗಿ ಜಾರಿಯಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕರೇ ಮೊದಲ ರಕ್ಷಣಾ ಕವಚವಾಗಬೇಕಿದೆ ಎಂದು ಸೈಫಿ ಆಸ್ಪತ್ರೆಯ ಮುಖ್ಯ ಡಯೆಟಿಷಿಯನ್ ತಹಸೀನ್ ಸಿದ್ದಿಕಿ ಸಲಹೆ ನೀಡಿದ್ದಾರೆ. ಗ್ರಾಹಕರು ಕಡ್ಡಾಯವಾಗಿ ಪರವಾನಗಿ ಪಡೆದ ಮಾರಾಟಗಾರರಿಂದಲೇ ವಸ್ತುಗಳನ್ನು ಕೊಳ್ಳಬೇಕು. ಪ್ಯಾಕೆಟ್ ಮೇಲಿರುವ ತಯಾರಿಕಾ ದಿನಾಂಕ, ಎಕ್ಸ್ಪೈರಿ ದಿನಾಂಕ ಮತ್ತು ಪದಾರ್ಥಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅಡುಗೆ ಎಣ್ಣೆಯನ್ನು ಪದೇಪದೇ ಮರುಬಳಕೆ ಮಾಡುವುದು, ಅವಧಿ ಮುಗಿದ ಆಹಾರ ಸೇವಿಸುವುದು ಮತ್ತು ಅನುಮಾನಾಸ್ಪದ ಮೂಲಗಳಿಂದ ಮಾಂಸ ಅಥವಾ ಡೈರಿ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಬೇಕು. ಸೋಷಿಯಲ್ ಮೀಡಿಯಾದಲ್ಲಿ ಬರುವ ವದಂತಿಗಳನ್ನು ಕುರುಡಾಗಿ ನಂಬದೆ, ಕಲುಷಿತ ಆಹಾರದ ಪ್ರಕರಣಗಳನ್ನು ತಕ್ಷಣವೇ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ವರದಿ ಮಾಡಬೇಕಿದೆ. ಏಕೆಂದರೆ, ಒಬ್ಬ ಜಾಗೃತ ಗ್ರಾಹಕ ಮಾತ್ರವೇ ಈ ವಿಷದ ಜಾಲಕ್ಕೆ ಬಲಿಯಾಗುವುದರಿಂದ ತಪ್ಪಿಸಿಕೊಳ್ಳಬಲ್ಲ.