ಪಶ್ಚಿಮ ಬಂಗಾಳ : ಮೊದಲ ಬಾರಿಗೆ ಬಂಗಾಳದಲ್ಲಿ (West Bengal) ಅಧಿಕಾರಕ್ಕೇರಿರುವ ಭಾರತೀಯ ಜನತಾ ಪಕ್ಷ (Bjp) ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಬಂಡಾಯ ನಾಯಕರು ಹಾಗೂ ಕಾರ್ಯಕರ್ತರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳದಿರಲು ಬಿಜೆಪಿ ನಿರ್ಧರಿಸಿದೆ. ತನ್ನ ರಾಜಕೀಯ ಸಿದ್ಧಾಂತ ಮತ್ತು ಆಂತರಿಕ ಶಿಸ್ತನ್ನು ಕಾಪಾಡಿಕೊಳ್ಳುವ ಸಲುವಾಗಿ ಈ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ತನ್ನ ಸಂಘಟನೆ ಟಿಎಂಸಿ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಫಲಿತಾಂಶದ ನಂತರ ಹಲವು ನಾಯಕರು ಟಿಎಂಸಿ ತೊರೆದು ಬಿಜೆಪಿಗೆ ಬರಲು ಸಿದ್ಧರಾಗಿದ್ದರೂ, ಇದುವರೆಗೆ ತಳಮಟ್ಟದಲ್ಲಿ ಹೋರಾಡಿದ ನಿಷ್ಠಾವಂತ ಕಾರ್ಯಕರ್ತರ ಹಿತದೃಷ್ಟಿಯಿಂದ ಪಕ್ಷ ಈ ನಿರ್ಧಾರಕ್ಕೆ ಬಂದಿದೆ. ಕೇವಲ ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವವರಿಂದ ಸಂಘಟನೆಯ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬುದು ರಾಜ್ಯ ನಾಯಕತ್ವದ ಅಭಿಪ್ರಾಯವಾಗಿದೆ. ಹಳೇ ಪಕ್ಷದ ಹಿಂಸಾಚಾರ ಮತ್ತು ಗುಂಪುಗಾರಿಕೆಯ ರಾಜಕಾರಣ ಬಿಜೆಪಿಯೊಳಗೆ ಪ್ರವೇಶಿಸುವುದನ್ನು ತಡೆಯುವುದೇ ಇದರ ಮುಖ್ಯ ಉದ್ದೇಶವಾಗಿದೆ.
ಇನ್ನು ಮುಂದೆ ಪಶ್ಚಿಮ ಬಂಗಾಳದಲ್ಲಿ ಇತರ ಪಕ್ಷಗಳ ಪ್ರಭಾವಿ ಮುಖಗಳನ್ನು ನೆಚ್ಚಿಕೊಳ್ಳುವ ಬದಲು, ಸ್ವಂತ ಬಲದ ಮೇಲೆ ಸಂಘಟನೆಯನ್ನು ಬಲಪಡಿಸಲು ಯೋಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಸ್ಥಳೀಯ ಹಾಗೂ ಯುವ ಮುಖಗಳಿಗೆ ಹೆಚ್ಚಿನ ಜವಾಬ್ದಾರಿ ಮತ್ತು ಚುನಾವಣಾ ಟಿಕೆಟ್ ನೀಡಲು ಆದ್ಯತೆ ನೀಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಮೂಲಕ ಬಂಗಾಳದಲ್ಲಿ ಹೊಸ ರಾಜಕೀಯ ದಿಕ್ಸೂಚಿ ಮೂಡಿಸಲು ಬಿಜೆಪಿ ಸಜ್ಜಾಗಿದೆ.