ತೆಲಂಗಾಣ : ಸದ್ಯ ಭಾರತ ಮತ್ತು ಪಾಕಿಸ್ತಾನದ ನಡುವೆ ಅಘೋಷಿತ ಯುದ್ಧ ನಡೆಯುತ್ತಿದ್ದು, ಗಡಿಯಲ್ಲಿ ಸಮರ ಸಾರುತ್ತಿರುವ ನಮ್ಮ ವೀರ ಯೋಧರಿಗೆ ಬೆಂಬಲಿಸಿ ತೆಲಂಗಾಣ ಸರ್ಕಾರದ ಕಾಂಗ್ರೆಸ್ ಸಚಿವರು, ಶಾಸಕರು ರಾಷ್ಟ್ರೀಯ ರಕ್ಷಣಾ ನಿಧಿಗೆ ತಮ್ಮ ಒಂದು ತಿಂಗಳ ಸಂಬಳವನ್ನು ನೀಡಲು ಮುಂದಾಗಿದ್ದಾರೆ.
ಭಾರತ ಮತ್ತು ಪಾಕ್ ಗಡಿಗಳಲ್ಲಿ ಪ್ರಸ್ತುತ ಹೆಚ್ಚಿನ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಸಚಿವರು ಸೇರಿದಂತೆ ತೆಲಂಗಾಣ ವಿಧಾನಸಭೆ ಮತ್ತು ಪರಿಷತ್ತಿನ ಎಲ್ಲ ಸದಸ್ಯರು ತಮ್ಮ ಒಂದು ತಿಂಗಳ ಸಂಬಳ ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆ ನೀಡಲು ನಿರ್ಧರಿಸಿದ್ದಾರೆಂದು ವರದಿಯಾಗಿದೆ.
ಪಾಕಿಸ್ತಾನದ ವಿರುದ್ಧ ಶೌರ್ಯದಿಂದ ಹೋರಾಡುತ್ತಿರುವ ಭಾರತೀಯ ಸೇನೆಗೆ ಸಹಾಯ ಮಾಡಲು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ರಾಷ್ಟ್ರೀಯ ರಕ್ಷಣಾ ನಿಧಿಗೆ ಒಂದು ತಿಂಗಳ ಸಂಬಳ ನೀಡುವ ಪ್ರಸ್ತಾಪವನ್ನು ಮಂಡಿಸಿದ್ದಾರೆ. ಪ್ರಸ್ತಾವನೆಯನ್ನು ಡಿಸಿಎಂ ಮಲ್ಲು ಭಟ್ಟಿ ವಿಕ್ರಮಾರ್ಕ ಅವರೊಂದಿಗೆ ಚರ್ಚಿಸಲಾಗಿದೆ.
ಈ ಪ್ರಸ್ತಾವನೆಯನ್ನು ಕಾಂಗ್ರೆಸ್ ಶಾಸಕರು ಮತ್ತು ಎಂಎಲ್ಸಿಗಳೊಂದಿಗೆ ಚರ್ಚಿಸಿದ ಬಳಿಕವೇ ಈ ಕುರಿತಾದ ಮಹತ್ವದ ನಿರ್ಧಾರದ ಬಗ್ಗೆ ಘೋಷಣೆ ಮಾಡಲಿದ್ದಾರೆ. ಇದಲ್ಲದೇ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಇತರ ಪಕ್ಷಗಳ ಶಾಸಕರು ಮತ್ತು ಎಂಎಲ್ಸಿಗಳನ್ನು ಒಂದು ತಿಂಗಳ ಸಂಬಳ ನೀಡಬೇಕೆಂದು ವಿನಂತಿಸಿದ್ದಾರೆ.