ಅಮರಾವತಿ: ಮಕ್ಕಳಿಗೆ ಪಾಠ ಹೇಳಿಕೊಡಬೇಕಾದ ಟೀಚರ್ (Teacher) ಒಬ್ಬಳು ಅದೇ ವಿದ್ಯಾರ್ಥಿಗಳ ಕೈಯಲ್ಲಿ ಕಾಲು ಒತ್ತಿಸಿಕೊಂಡಿರುವ (Massage) ಘಟನೆ ಆಂಧ್ರಪ್ರದೇಶದ (Andhra Pradesh) ಶ್ರೀಕಾಕುಳಂ ಜಿಲ್ಲೆಯ ಬಂಡಪಲ್ಲ ಎಂಬಲ್ಲಿ ನಡೆದಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದೆ. ಶಿಕ್ಷಕಿಯ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಶ್ರೀಕಾಕುಳಂ ಜಿಲ್ಲೆಯ ಬಂಡಪಲ್ಲಿ ಬಾಲಕಿಯರ ಶಾಲೆಯಲ್ಲಿ ಕೆಲಸದ ಸಮಯದಲ್ಲಿ ವಿದ್ಯಾರ್ಥಿಗಳು ಶಿಕ್ಷಕಿಯ ಕಾಲಿಗೆ ಮಸಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ ಶಿಕ್ಷಕಿ ಆರಾಮಾಗಿ ತನ್ನ ಕುರ್ಚಿಯಲ್ಲಿ ಕುಳಿತುಕೊಂಡು ಮೊಬೈಲ್ನಲ್ಲಿ ಕಾಲಹರಣ ಮಾಡುತ್ತಾ ಮಸಾಜ್ ಅನ್ನು ಆನಂದಿಸುತ್ತಿರುವುದು ಕಾಣಿಸಿಕೊಂಡಿದೆ.
ಬುಡಕಟ್ಟು ಮಕ್ಕಳ ಶಾಲೆಯಲ್ಲಿ ಟೀಚರಮ್ಮನ ದರ್ಬಾರ್ ಪಾದಕ್ಕೆ ಮಸಾಜ್ ಸೇವೆ!#littlekidschool #massage #service #teachers #videoviral #KannadaNews #navasamajanews pic.twitter.com/ohv9Y9bUer
— navasamaja (@navasamajanews) November 5, 2025
ಈ ಘಟನೆಗೆ ಭಾರೀ ವಿರೋಧ ವ್ಯಕ್ತವಾಗುತ್ತಲೇ ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಂಡು ಆಕೆಯನ್ನು ಅಮಾನತ್ತು ಮಾಡಲಾಗಿದೆ. ವೈರಲ್ ಆದ ವಿಡಿಯೊದಲ್ಲಿ ಮುಖ್ಯೋಪಾಧ್ಯಾಯಿನಿ ಆರಾಮವಾಗಿ ಕುಳಿತುಕೊಂಡು ಯಾರೊಂದಿಗೋ ಫೋನಿನಲ್ಲಿ ಮಾತನಾಡುತ್ತಿರುವುದು ಕಾಣಿಸಿಕೊಂಡಿದೆ. ಶಿಕ್ಷಕಿಯ ಕಾಲಿನ ಬಳಿ ಇಬ್ಬರು ವಿದ್ಯಾರ್ಥಿಗಳು ಕುಳಿತುಕೊಂಡು ಶಿಕ್ಷಕಿಯ ಪಾದ, ಮೊಣಕಾಲುಗಳನ್ನು ಒತ್ತಿ ಮಸಾಜ್ ಮಾಡಿದ್ದಾರೆ.
ಈ ಎಲ್ಲಾ ದೃಶ್ಯಗಳನ್ನು ಶಾಲೆಯ ಸಿಬಂದಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಎಕ್ಸ್ ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಕಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಶಿಕ್ಷಣ ಅಧಿಕಾರಿಗಳು ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳಲು ನೋಟಿಸ್ ಹೊರಡಿಸಿದ್ದಾರೆ. ಮೇಲಾಧಿಕಾರಿಗಳ ಹಾಗೂ ಸರ್ಕಾರದ ಆದೇಶದ ಮೇರೆಗೆ ಸೀತಾಂ ಪೇಟದ ಸಮಗ್ರ ಬುಡಕಟ್ಟು ಅಭಿವೃದ್ಧಿ ಸಂಸ್ಥೆಯ ಯೋಜನಾ ಅಧಿಕಾರಿಯಾದ ಪವಾರ್ ಸೃಪ್ಟಿಲ್ ಜಗನ್ನಾಥ್ ಅವರು ತಕ್ಷಣವೇ ಘಟನೆ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ.
ಇನ್ನು ವಿದ್ಯಾರ್ಥಿಗಳ ಕೈಯಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿಯನ್ನು ವೈ ಸುಜಾತ ಎಂದು ಗುರುತಿಸಲಾಗಿದೆ. ತನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಕೂಡ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಆಕೆ ಮಾತನಾಡಿ, ನಾನು ಕೆಳಗೆ ಬಿದ್ದಿದ್ದು ತನಗೆ ಮೊಣಕಾಲು ನೋವಿದ್ದ ಕಾರಣ ವಿದ್ಯಾರ್ಥಿ ಗಳು ನನಗೆ ಸಹಾಯ ಮಾಡುತ್ತಿದ್ದರು. ವಿಡಿಯೋದಲ್ಲಿ ಕಂಡದ್ದು ಸುಳ್ಳು ಮಕ್ಕಳು ನನಗೆ ಆರೋಗ್ಯ ದೃಷ್ಟಿಯಿಂದ ಸಹಾಯ ಮಾಡುತ್ತಿದ್ದರಷ್ಟೇ ಆದರೆ ಇಲ್ಲಿ ಸತ್ಯವನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯ ಲ್ಯಾಬ್ ನಲ್ಲೇ ಎಡವಟ್ಟು – ರೋಗಿಯ ಪ್ರಾಣಕ್ಕೇ ಕುತ್ತು