ಚೆನ್ನೈ : ತಮಿಳುನಾಡಿನಲ್ಲಿ (Tamil Nadu) ಮತ್ತೊಂದು ಹೊಸ ಪಕ್ಷ ಸ್ಥಾಪನೆಯಾಗಿದೆ. ಹೊಸ ಪಕ್ಷವನ್ನು ವಿ.ಕೆ.ಶಶಿಕಲಾ (VK Shashikala) ಘೋಷಣೆ ಮಾಡಿ ಪಕ್ಷದ ಬಾವುಟ ಬಿಡುಗಡೆ ಮಾಡಿದ್ದಾರೆ. ತಮ್ಮ ಪಕ್ಷಕ್ಕೆ ‘ಅಖಿಲ ಭಾರತ ಪುರಚಿ ತಲೈವರ್ ಮಕ್ಕಳ್ ಮುನ್ನೇತ್ರ ಕಳಗಂ’ ಎಂದು ಹೆಸರಿಟ್ಟಿದ್ದಾರೆ. ಪಕ್ಷದ ಚಿಹ್ನೆಯಾಗಿ ‘ತೆಂಗಿನ ತೋಟ’ವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಕಪ್ಪು, ಬಿಳಿ, ಕೆಂಪು ಬಣ್ಣದ ಬಾವುಟ ಬಿಡುಗಡೆ ಮಾಡಿದ್ದು, ಅಣ್ಣಾದೊರೈ, MGR, ಜಯಲಲಿತಾ ಭಾವಚಿತ್ರದ್ದಾಗಿದೆ. ತಮಿಳುನಾಡಿನ ಎಲ್ಲರಿಗೂ ಈ ಬಾವುಟ ಮೇಲೆ ಹಕ್ಕಿದೆ ಅಣ್ಣಾ, MGR, ಜಯಲಲಿತಾ ಹಾದಿಯಲ್ಲಿ ಸಾಗುತ್ತೇವೆ. ನಮ್ಮ ಪಕ್ಷವು ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಚುನಾವಣೆಯಲ್ಲಿ ತಮ್ಮ ಪಕ್ಷ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಶಶಿಕಲಾ ಹೇಳಿದ್ದಾರೆ.
ನೂತನ ಪಕ್ಷಕ್ಕೆ ‘ಆಲ್ ಇಂಡಿಯಾ ಪುರಚ್ಚಿ ತಲೈವರ್ ಮಕ್ಕಳ್ ಮುನ್ನೇಟ್ರ ಕಳಗಂ’ (AIPTMMK) ಎಂದು ಹೆಸರಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತೆಂಗಿನ ತೋಟದ ಚಿಹ್ನೆಯಡಿಯಲ್ಲಿ ಸ್ಪರ್ಧಿಸುವುದಾಗಿಯೂ ಶಶಿಕಲಾ ಘೋಷಿಸಿದ್ದಾರೆ.
ತೆಂಗಿನ ತೋಟದಲ್ಲಿ ಕಪ್ಪು, ಬಿಳಿ ಮತ್ತು ಕೆಂಪು ಬಣ್ಣದ ಧ್ವಜದ ಮಧ್ಯದಲ್ಲಿ ಸಿ.ಎನ್. ಅಣ್ಣಾದೊರೈ, ಎಂಜಿಆರ್ ಮತ್ತು ಜಯಲಲಿತಾ ಅವರ ಫೋಟೋಗಳಿವೆ.
‘ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿಗೆ ಸಿದ್ದ’ ಎನ್ನುವ ಮೂಲಕ ಡಿಎಂಕೆಗೆ ಶಾಕ್ ನೀಡಿದ್ದಾರೆ. ‘ಡಿಎಂಕೆ ಎಂಬ ದುಷ್ಟ ಶಕ್ತಿಯನ್ನು ಅಧಿಕಾರದಿಂದ ತೆಗೆದುಹಾಕುವುದು ನನ್ನ ಗುರಿ’ ಎಂದು ಶಶಿಕಲಾ ಗುಡುಗಿದ್ದಾರೆ.
‘ಜಯಲಲಿತಾ ಉತ್ತಮ ಸರ್ಕಾರವನ್ನು ನೀಡಿದ್ದರು. ಅವರು ಒಬ್ಬ ಮಹಾನ್ ವ್ಯಕ್ತಿ. ಅವರ ನಿಧನದ ನಂತರ, ಡಿಎಂಕೆ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಇದಕ್ಕೆ ಅಂತ್ಯ ಹಾಡಬೇಕು. ಅದಕ್ಕಾಗಿಯೇ ನಾನು ಪಕ್ಷವನ್ನು ಘೋಷಿಸಿದ್ದೇನೆ’ ಎಂದು ಸ್ಟಾಲಿನ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
‘ವಿಜಯ್ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೂ ಮುನ್ನ ನಾನು ಡಿಎಂಕೆಯ ಜನವಿರೋಧಿಗಳನ್ನು ತಡೆಯಲು ಹಾಗೂ ಅವರ ದುರಾಡಳಿತಕ್ಕೆ ಇತಿಶ್ರೀ ಹಾಡಲು ಪಕ್ಷವನ್ನು ಸ್ಥಾಪಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದು
ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಮಾನ್ಯತೆ ನೀಡುವ ಸಂಪ್ರದಾಯ ಅಲ್ಲಿನ ಜನರಲ್ಲಿದೆ. ಹೀಗಾಗಿ ಚುನಾವಣೆಯ ಹೊಸ್ತಿಲಲ್ಲೇ ಶಶಿಕಲಾ ಇಂದು ಪಕ್ಷದ ಹೆಸರನ್ನು ಘೋಷಿಸಿರುವುದು ರಾಜ್ಯ ರಾಜಕಾರಣ ಯಾವ ಮಗ್ಗಲಿಗೆ ಹೊರಳಲಿದೆ ಎಂಬ ಕುತೂಹಲವು ಹೆಚ್ಚಾಗಿದೆ.
ತಮಿಳುನಾಡಲ್ಲಿ ಒಂದೇ ಹಂತದ ಚುನಾವಣೆ
ತಮಿಳುನಾಡು ಸಹಿತ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಮಾರ್ಚ್ 15ರ ಬಳಿಕ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಪಶ್ಚಿಮ ಬಂಗಾಳದ ಅಂತಿಮ ಮತದಾರರ ಪಟ್ಟಿಯ ಕುರಿತು ಆಕ್ಷೇಪ ಸಲ್ಲಿಸಲಿರುವ ಅಂತಿಮಾವಧಿ ಮಾರ್ಚ್ 15ಕ್ಕೆ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 16 ಅಥವಾ 17ರಂದು ಚುನಾವಣಾ ಘೋಷಣೆ ಸಾಧ್ಯತೆ ನಿರೀಕ್ಷಿಸಲಾಗಿದೆ.
ಕೇರಳ ಸಹಿತ ಮೂರು ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಪರಿಗಣಿಸಲಾಗಿದೆ. ಕೇರಳದ ಹೊರತು ತಮಿಳುನಾಡು ಮತ್ತು ಪುದುಚ್ಚೇರಿಯಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಮೂರು ಹಂತದ ಚುನಾವಣೆಗೆ ಸಿದ್ದತೆಯಾಗಿದೆ.