ಭೋಪಾಲ್: ಉತ್ತಮ ಅಭ್ಯಾಸಗಳನ್ನು ಹೇಳಿಕೊಡಬೇಕಾದ ಶಿಕ್ಷಕರೇ ವಿದ್ಯಾರ್ಥಿಗೆ ಬಿಯರ್ ಕುಡಿಯುವಂತೆ ಕಿರುಕುಳ ನೀಡಿದ್ದಾರೆ. ಇದ್ರಿಂದ ಮನನೊಂದು 12ನೇ ತರಗತಿಯ ವಿದ್ಯಾರ್ಥಿಯೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘನಟೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ.
ಘಟನೆಗೂ ಮುನ್ನ ವಿದ್ಯಾರ್ಥಿ ವಿಡಿಯೋ ಮಾಡಿದ್ದು ಶಿಕ್ಷಕನ ಕಿರುಕುಳದಿಂದ ಇನ್ನಷ್ಟು ಮಕ್ಕಳು ಪ್ರಾಣ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾನೆ. ಒಮ್ಮೆಯಾದ್ರೂ ಸಹವಿದ್ಯಾರ್ಥಿಗಳೊಂದಿಗೆ ಸೇರಿ ‘ಬಿಯರ್’ ಕುಡಿಯಬೇಕು. ಇಲ್ಲದಿದ್ದರೆ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ನೀಡುತ್ತೀನಿ ಅಂತ ವಿದ್ಯಾರ್ಥಿಗೆ ಶಿಕ್ಷಕ ಬೆದರಿಕೆ ಹಾಕಿದ್ದರಿಂದ ನೊಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಜನವರಿ 22ರಂದು ಭೋಪಾಲ್ನಿಂದ 280 ಕಿಲೋಮೀಟರ್ ದೂರದಲ್ಲಿರುವ ಕೋಲಾರಸ್ ರೈಲು ನಿಲ್ದಾಣದ ಬಳಿ ವಿದ್ಯಾರ್ಥಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈಲು ಚಾಲಕ ತುರ್ತು ಬ್ರೇಕ್ ಹಾಕಿದರೂ ವಿದ್ಯಾರ್ಥಿಯನ್ನು ಪ್ರಾಣಾಪಾಯದಿಂದ ಪಾರುಮಾಡಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ. ಘಟನೆ ಸಂಬಂಧ ವಿದ್ಯಾರ್ಥಿಯ ವಿಡಿಯೋ ಆಧರಿಸಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.